ಬೆಂಗಳೂರು: ಸಮಾಜ ಸೇವೆಯ ಮೂಲಕ ರೋಟರಿ ಸಂಸ್ಥೆ ಮಾನವೀಯ ಬೆಸುಗೆಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.ರೋಟರಿ ಸಂಸ್ಥೆ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಮಿತ್ರರಿಗೆ ಅವರು ರೋಟರಿ ಫಾಲ್ಕನ್ಸ್ ಮೀಡಿಯಾ ಪ್ರಶಸ್ತಿ ವಿತರಿಸಿ ಗೌರವಿಸಿ ಮಾತನಾಡಿದರು.ರೋಟರಿ ಸಂಸ್ಥೆಯ ಮೂಲ ಉದ್ದೇಶ ಸ್ವಾರ್ಥವಿಲ್ಲದ ಸೇವೆ. ನಮ್ಮ ಸಮಾಜದಲ್ಲಿ ಸ್ವಾರ್ಥ ಮನೋಭಾವ ಹೆಚ್ಚುತ್ತಿದೆ. ನಾನು, ನನ್ನದು ನನಗೋಸ್ಕರ ಎನ್ನುವಂತಾಗಿದೆ. ಸಮಾಜಕ್ಕಾಗಿ ನಾವು ಏನು ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಬಂದಾಗ ಉತ್ತರ ಶೂನ್ಯ.
ಇದು ಎಲ್ಲವನ್ನೂ ಮೀರಿ ಬೆಳೆದಿರುವಂತಹ ರೋಟರಿ ಸಂಸ್ಥೆ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿದೆ. ಶಿಕ್ಷಣ, ಆರೋಗ್ಯ ಮತ್ತು ಪರಿಸರ ವಿಚಾರಗಳಲ್ಲಿ ಈ ಸಂಸ್ಥೆ ತನ್ನದೇ ಆದ ಚಟುವಟಿಕೆಗಳನ್ನು ನಡೆಸುತ್ತಿದೆ.ಇಂದು ಎಲ್ಲರಿಗೂ ಅಗತ್ಯವಾದದ್ದು ನೀರು. ಒಂದು ಬಿಲಿಯನ್ ನೀರಿನ ಕನಸು ನನಸು ಎಂಬ ಸಂಸ್ಥೆಯ ಕಾರ್ಯಕ್ರಮ ಮೆಚ್ಚುಗೆಗೆ ಅರ್ಹ. ಬರಪೀಡಿತ ಕೋಲಾರ ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ಆರಂಭವಾಗುತ್ತಿರುವುದು ಸಂತಸದ ವಿಚಾರ. ಸದಾ ಮಳೆಯ ಕೊರತೆ ಎದುರಿಸುವ ಕೋಲಾರ ಜಿಲ್ಲೆಗೆ ನೀರು ಅತ್ಯಗತ್ಯ ಬರದಲ್ಲಿಯೂ ಬಂಗಾರದ ಬೆಳೆ ಬೆಳೆಯುವ ರೈತರ ನೆರವಿಗೆ ಸಂಸ್ಥೆ ಮುಂದಾಗಿರುವುದು ಅಭಿನಂದನೀಯ.ಪರಿಸರದ ಬಗ್ಗೆ ಸಂಸ್ಥೆ ಕಾಳಜಿ ವಹಿಸಿದೆ. ಪರಿಸರದ ಮೇಲಾಗುತ್ತಿರುವ ದಾಳಿಯ ಪರಿಣಾಮಗಳನ್ನು ನಾವು ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿಯೂ ಬೇಸಿಗೆಯೆ ಅನುಭವ ಆಗುತ್ತಿರುವುದೇ ಇದಕ್ಕೆ ಸಾಕ್ಷಿ. ಪರಿಸರ ಸಂರಕ್ಷಣೆಗೂ ಕೂಡ ವಿಶೇಷ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಹಾಕಿಕೊಂಡಿದೆ. ಸಮಾಜ ಸೇವೆ ಅಂದ್ರೆ ಅದರಿಂದ ಬಡವರಿಗೆ ಅನುಕೂಲ ಆಗುವದಷ್ಟೆ ಅಲ್ಲ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ, ಜೀವನ ಮಟ್ಟ ಸುಧಾರಿಸುತ್ತೆ, ಜೊತೆಗೆ ಸಮಾಜದಲ್ಲಿ ಒಂದು ಐಕ್ಯತೆ ಬೆಳೆಯುತ್ತದೆ. ಇವತ್ತು ನೀವು ಉದ್ದಿಮೆದಾರರಾಗಿರಬಹುದು, ಬೇರೆ ಬೇರೆ ಕೆಲಸ ಕಾರ್ಯಗಳನ್ನು ಮಾಡತ್ತಿರಬಹುದು ಅದರಲ್ಲೆ ನೀವು ಸಂಸ್ಥೆಗೆ ಬಂದು ಸಮಾಜ ಸೇವೆಗೆ ಕೈಜೋಡಿಸಿದ್ದೀರಿ.ನಮ್ಮಿಂದ ಸಮಾಜಕ್ಕೆ, ದುರ್ಬಲ ವರ್ಗದವರಿಗೆ ಬಡವರಿಗೆ ಅನುಕೂಲ ಆಗಲಿ ಎಂದು ನೀವೆಲ್ಲ ಸೇರಿ ಒಟ್ಟಿಗೆ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶಂಸಿಸಿದರು.ನಮ್ಮಲ್ಲಿ ಮಾನವೀಯ ಮೌಲ್ಯಗಳು ಮತ್ತು ಬಾಂಧವ್ಯ ಇವೆರಡನ್ನೂ ಕೂಡ ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ. ಮೊಬೈಲ್ ಫೋನ್ ಗಳು ಬಂದ ಬಳಿಕ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ರೋಟರಿ ಸಂಸ್ಥೆ ಜನರೊಂದಿಗೆ ಬೆರೆತು ಜನರಿಗೋಸ್ಕರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ಮೆಚ್ಚುವಂತಹ ಸಂಗತಿ ಎಂದು ಹೇಳಿದರು.ಸಚಿವ ರಾಮಲಿಂಗಾ ರೆಡ್ಡಿ, ಸಿನಿಮಾ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ರೋಟರಿ ಸಂಸ್ಥೆಯ ಅನಿಲ್ ಗುಪ್ತ, ನಾಗೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಉಪಸ್ಥಿತರಿದ್ದರು.
ಮಾಧ್ಯಮ ಕ್ಷೇತ್ರದ ಸಾಧಕರಿಗೆ ರೋಟರಿ ಫಾಲ್ಕನ್ಸ್ ಮೀಡಿಯಾ ಪ್ರಶಸ್ತಿ ಪ್ರದಾನ



