ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾ ವಣೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರ ಬಹುತೇಕರ ಗಮನ ಸೆಳೆಯುವ ಕ್ಷೇತ್ರವಾಗಿದೆ.ಈ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಯಿಂದ ಗೆದ್ದು ಐದು ವರ್ಷಗಳ ಕಾಲ ಸಂಸದರಾಗಿ ಕಾರ್ಯನಿರ್ವಹಿಸಿ ರುವ ಬಿಜೆಪಿಯ ತೇಜಸ್ವಿ ಸೂರ್ಯ ಅವರ ವಿರುದ್ಧ ಜಯನಗರ ಕ್ಷೇತ್ರದಿಂದ ಈ ಹಿಂದೆ ಗೆದ್ದು ಶಾಸಕಿಯಾಗಿದ್ದ ಹಾಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಕಣದಲ್ಲಿದ್ದಾರೆ.
ಈಗಾಗಲೇ ಶಾಸಕಿಯಾಗಿದ್ದ ಸೌಮ್ಯರೆಡ್ಡಿ ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳ ಮಾಡಿ ಜನಮನ ಸೆಳೆದಿದ್ದಾರೆ. ಚುನಾವಣಾ ಕಣದಲ್ಲಿ ಪ್ರತಿನಿತ್ಯ ಬೆಳಗಿನಿಂದ ರಾತ್ರಿ ಚುನಾವಣಾ ಪ್ರಚಾರದ ಗಡುವು ಮುಗಿಯುವವರೆಗೂ ವಿಶ್ರಾಂತಿಯಿಲ್ಲದ ಕಾರ್ಯಕರ್ತರ ಪಡೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ತಮ್ಮ ತಂದೆ ಸಚಿವ ರಾಮಲಿಂಗಾರೆಡ್ಡಿ ಅವರ ಮಾದರಿಯಲ್ಲೇ ಅಜಾತಶತ್ರುವಾಗಿ ಬೆಳೆಯುವ ಲಕ್ಷಣಗಳು ಸೌಮ್ಯರಲ್ಲಿವೆ.ಸೌಮ್ಯ ರೆಡ್ಡಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರು. ವಿದ್ಯಾವಂತ ರಾಜಕಾರಣಿಯಾಗಿರುವ ಇವರು ರಾಜಕೀಯ ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ.
ಈಗಾಗಲೇ ತಮ್ಮ ಅಭಿವೃದ್ಧಿ ಕೆಲಸ ಹಾಗೂ ಹೋರಾಟಗಳಿಂದ ಜನ ಮನ್ನಣೆ ಗಳಿಸಿದ್ದಾರೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಅವರ ಪುತ್ರಿಯಾಗಿರುವ ಸೌಮ್ಯ ರೆಡ್ಡಿ, ಮಾರ್ಚ್ 18, 1983ರಲ್ಲಿ ಜನಿಸಿದರು. ತಂದೆ ರಾಮಲಿಂಗ ರೆಡ್ಡಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕಾರಣ ಸೌಮ್ಯ ರೆಡ್ಡಿ ಮೊದಲಿನಿಂದಲೂ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
ಬೆಂಗಳೂರಿನ ಆರ್ವಿ ಇಂಜಿನಿರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿದ ಬಳಿಕ ಸೌಮ್ಯ ರೆಡ್ಡಿ ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ಮುಗಿಸಿದರು. ಅವರು ಮೊದಲಿನಿಂದಲೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗಿಯಾಗಿಯುತ್ತಿದ್ದರು. ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ವಿರುದ್ಧ ಅನೇಕ ಹೋರಾಟಗಳನ್ನು ನಡೆಸಿದ್ದಾರೆ.
2014ರಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಸೌಮ್ಯ ರೆಡ್ಡಿ ಅವರು, ಬಳಿಕ ರಾಜಕೀಯದತ್ತ ಒಲವು ತೋರಿದರು. ತಂದೆಯ ಮಾರ್ಗವನ್ನೇ ಹಿಡಿದ ಸೌಮ್ಯ ರೆಡ್ಡಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ, ಪಕ್ಷದ ಸದಸ್ಯರಾದರು. ಬಳಿಕ 2016ರಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾದರು.
ಕಾಂಗ್ರೆಸ್ನಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಅವರು ವಿಧಾನಸಭೆ ಪ್ರವೇಶಿಸಲು ಜಯನಗರ ವಿಧಾಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದು ಯಶಸ್ವಿಯಾದರು. ಬಹುತೇಕ ಸಮಾಜಮುಖಿ ಪರ ಸಂಘಟನೆಗಳು ಸೌಮ್ಯ ಅವರ ಬೆಂಬಲಕ್ಕೆ ಬಹಿರಂಗವಾಗಿ ನಿಂತಿರುವುದು ಈ ಬಾರಿಯ ವಿಶೇಷವಾಗಿದೆ.
ನಿನ್ನೆ ಸಂಜೆ ಪ್ರಮುಖ ಸಮುದಾಯದ ಮುಖಂಡರು ಸಭೆ ಸೇರಿ ಸೌಮ್ಯರವರನ್ನು ಈ ಬಾರಿ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳ ಲಾಗಿದೆ. ಒಟ್ಟಾರೆ ಸೌಮ್ಯ ಅವರ ಚುನಾವಣಾ ಪ್ರಚಾರ ಅಂತೂ ಜನಮನ ಸೆಳೆದಿದೆ.ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದ ಎಐಸಿಸಿ ಪ್ರಧಾನಕಾರ್ಯದರ್ಶಿಯಾಗಿರುವ ಇಂದಿರಾಗಾಂಧಿಯವರ ಮೊಮ್ಮಗಳಾದ ಪ್ರಿಯಾಂಕ ಗಾಂಧಿ ಸೌಮ್ಯ ಅವರ ಪರ ಪ್ರಚಾರ ನಡೆಸಿ ಮತ ಯಾಚಿಸಿದ್ದಾರೆ.