ಡಾ.ಜಿ.ವೈ.ಪದ್ಮನಾಗರಾಜು
ಬೆಳಗಾವಿ: ವಿಧಾನಸಭೆಯಲ್ಲಿಂದು ಸದಸ್ಯರು ತಮ್ಮ ತಮ್ಮ ವಿಷಯವನ್ನು ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕೋರಿ ಉತ್ತರಕ್ಕೆ ಪಟ್ಟು ಹಿಡಿದ ಪರಿಣಾಮ ಸಭಾಧ್ಯಕ್ಷರು ಸದಸ್ಯರ ಗದ್ದಲಕ್ಕೆ ಬೇಸತ್ತು ಅಸಮಾಧಾನ ಹೊರ ಹಾಕಿದ ಘಟನೆ ನಡೆಯಿತು.
ಇಂದು ವಿಧಾನಸಭೆ ಕಲಾಪದ ವೇಳೆ ಜೆಡಿಎಸ್ನ ರೇವಣ್ಣ ಅವರು ಕೊಬ್ಬರಿ ಬೆಂಬಲ ವಿಷಯಕ್ಕೆ ಚರ್ಚೆಗೆ ಅವಕಾಶ ಕೋರಿ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು.
ಈ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಂ.ಟಿ.ಕೃಷ್ಣಪ್ಪ, ನೇಮಿರಾಜನಾಯಕ ಮತ್ತಿತರರು ಮುಂದಾದರು. ಇದೇ ಸಂದರ್ಭದಲ್ಲಿ ಕೊಬ್ಬರಿ ವಿಷಯವನ್ನು ಸಹ ಪ್ರಸ್ತಾಪಿಸಲು ಕಾಂಗ್ರೆಸ್ನ ಶಿವಲಿಂಗೇಗೌಡ ಅವರು ಮುಂದಾದರು. ಇದನ್ನು ಕಂಡ ಸಭಾಧ್ಯಕ್ಷರು ನಿಮಗೆ ನಿಜವಾಗಲು ಕೊಬ್ಬರಿ ಬಗ್ಗೆ ಇಷ್ಟವಿದೆಯೇ ಅಥವಾ ದ್ವೇಷ ಮಾಡುವುದೋ ಎಂದು ಹರಿಹಾಯ್ದರು.
ನೀವು ಗದ್ದಲ ಮಾಡುವುದಾದರೆ ಹೊರಗೆ ದೊಡ್ಡ ಮೈದಾನವಿದೆ. ಅಲ್ಲಿ ಹೋಗಿ ಬೊಬ್ಬೆಹೊಡಿಯಿರಿ. ಇಲ್ಲಿ ಬಂದು ಏಕೆ ಕೂಗಾಡುತ್ತೀರಿ ಎಂದು ಹರಿಹಾಯ್ದರು.ಒಂದು ಹಂತದಲ್ಲಿ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಇಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆಯೇ ಚರ್ಚೆ ಬೇಡ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂದಾಗ ನೀವು ಕೂತುಕೊಳ್ಳಿ ಎಂದು ಸಭಾಧ್ಯಕ್ಷರು ಸೂಚಿಸಿದಾಗ ಸವದಿಯವರು ಇದಕ್ಕೆ ತೀವ್ರ ಇರಿಸುಮುರಿಸುಗೊಳಗಾದರು.
ಮೇಲ್ಮನೆಯಲ್ಲಿ ಮುಂದುವರಿದ ಧರಣಿ
ಬೆಳಗಾವಿ: 7 ನೇ ವೇತನ ಆಯೋಗ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಾಪ ಆರಂಭ ಆಗುತ್ತಿದ್ದಂತೆ ವಿಪಕ್ಷ ಸದಸ್ಯರಿಂದ ಧರಣಿ ಮುಂದುವರಿಯಿತು.
ವೈ. ಎ. ನಾರಾಯಣ್ ಸ್ವಾಮಿ ಮಾತನಾಡಿ, 7 ನೇ ವೇತನ ಆಯೋಗ ಜಾರಿ ಆಗಬೇಕು ಎಂದು ಒತ್ತಾಯಿಸಿದ್ದಾರೆ. ನಿನ್ನ ಸಭಾ ನಾಯಕರು ಕೊಟ್ಟ ಸಮರ್ಪಕವಾಗಿಲ್ಲ. ಮುಂದೆ ರಾಜ್ಯದಲ್ಲಿ ಸಾಲು ಸಾಲು ಚುನಾವಣೆ ಇವೆ. 7ನೇ ವೇತನ ಆಯೋಗ ಯಾವಾಗ ಜಾರಿ ಆಗುತ್ತೆ ಅಂತ ಹೇಳಬೇಕೆಂದು ಒತ್ತಾಯಿಸಿ ಪಟ್ಟು ಹಿಡಿದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಅವರು ಮಾತನಾಡಿ, ಸಿಎಂ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಸುಮ್ಮನೆ ಸದನದಲ್ಲಿ ಕಾಲ ಹರಣ ಮಾಡಬೇಡಿ. ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಈ ಹೀಗೆ ಧರಣಿ ಮಾಡಿ ಸದನದ ಟೈಂ ವೆಸ್ಟ್ ಮಾಡಬೇಡಿ ಎಂದರು.
ಸಲೀಂ ಅಹಮದ್ ಮಾತಿಗೆ ವಿಪಕ್ಷ ಸದಸ್ಯರು ತೀವ್ರ ಅಸಮಾಧಾನಗೊಂಡರು. ಈ ವೇಳೆ ಸಭಾಪತಿ ಅವರು 10 ನಿಮಿಷಗಳ ಕಾಲ ಸದನವನ್ನ ಮುಂದೂಡಿಕೆ ಮಾಡಿದರು.