ಕೋಲಾರ ತಾಲ್ಲೂಕು, ಸೀಪೂರು ಗ್ರಾಮದಲ್ಲಿ 106ನೇ ವರ್ಷದ ಅದ್ದೂರಿ “ಉರುಸ್ ಮಹೋತ್ಸವ” ಅಂಗವಾಗಿ “ಗಂಧ ಲೇಪನ” ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗಿತು. ಸರ್ವಧರ್ಮ ಸಮನ್ವಯದ ಪ್ರತೀಕವಾದ ಈ ಆಚರಣೆಯು ಜನರಲ್ಲಿ ಶಾಂತಿ ನೆಮ್ಮದಿ ಮತ್ತು ಸಹಬಾಳ್ವೆ ಹಾಗೂ ಸಹೋದರತ್ವವನ್ನು ಬೆಳೆಸುವ ಹಬ್ಬವಾಗಿದೆ.
ಧಾರ್ಮಿಕ ಸೇವಕರು ಮತ್ತು ಪಾರಂಪರಿಕ ನಾಟಿ ವೈದ್ಯರಾದ ಡಾ. ನೂರುಲ್ಲಾ. ಪಿ ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮವು ಅನೇಕ ಸಂಗತಿಗಳ ಸಮ್ಮಿಲನವಾಗಿತ್ತು. 2024ನೇ ವರ್ಷದ ಕನ್ನಡ ಪಾಕೆಟ್ ಕ್ಯಾಲೆಂಡರ್ ಮತ್ತು ಉರ್ದು ಭಾಷೆಯ ಕ್ಯಾಲೆಂಡರನ್ನು ಅಬಕಾರಿ ಇಲಾಖೆಯ ಉಪಯುಕ್ತರಾದ ಡಾ. ಬಿ. ಆರ್. ಹಿರೇಮಠ್ ಬಿಡುಗಡೆಗೊಳಿಸಿದರು. ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಮತ್ತು ಧ್ವಜಾರೋಹಣ ನೆರವೇರಿಸಿದರು.
ಡಾ.ನೂರುಲ್ಲಾ.ಪಿ ರವರು ಕರುನಾಡು ಜನ ಸೇವಾ ಸಮಿತಿಯ ಅಧ್ಯಕ್ಷರಾಗಿ ಕನ್ನಡಪರ ಕೆಲಸಗಳನ್ನು ಮಾಡುವುದರ ಜೊತೆಗೆ ಉರುಸ್ ಕಾರ್ಯಕ್ರಮದ ನಡುವೆ ಕನ್ನಡ ರಾಜ್ಯೋತ್ಸವವನ್ನು ಏರ್ಪಡಿಸಿದ್ದರು. ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ವಿವಿಧ ಕ್ರೀಡೆಗಳಲ್ಲಿ ಭಾಗಿಯಾದ ಮಕ್ಕಳಿಗೆ ಬಹುಮಾನ ವಿತರಣೆ, ಉರುಸ್ ಆಚರಣೆಯ ಸಲುವಾಗಿ ನಾಲ್ಕು ದಿನಗಳ ಅನ್ನದಾಸೋಹ, ಹಾಗೂ ಗಂಧ ಲೇಪನ ವಿಶೇಷ ಆಚರಣೆ ಬಹಳ ಅರ್ಥಪೂರ್ಣವಾಗಿ ಜರಗಿತು.
ಉರುಸ್ ಹೊತ್ತ ನೂರುಲ್ಲಾ ರವರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಾವೈಕ್ಯತೆಯ ಸಂದೇಶವನ್ನು ಗ್ರಾಮೀಣ ಭಾಗದಲ್ಲಿ ಪಸರಿಸಿದರು. ಸೀಪೂರು ಗ್ರಾಮದ ಎಲ್ಲಾ ಧರ್ಮಿಯರು, ಗ್ರಾಮಸ್ಥರು ಒಟ್ಟಾಗಿ ಸೇರಿ ಈ ಆಚರಣೆಯನ್ನು ಮಾಡುವ ಮೂಲಕ ನಾಡಿನ ಜನರಿಗೆ ಸೌಹಾರ್ದತೆಯ ಸಂದೇಶವನ್ನು ರವಾನಿಸಿದರು.ಭಾವ ವೈವಿಧ್ಯತೆಯ ಆಚರಣೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಡಗರದಿಂದ ಸಾಮೂಹಿಕವಾಗಿ ಪಾಲ್ಗೊಂಡಿದ್ದರು.