ಬೆಂಗಳೂರು: ನಾಗರಬಾವಿ ಪಾಪರೆಡ್ಡಿಪಾಳ್ಯದಲ್ಲಿ ನಿನ್ನೆ ಮಧ್ಯಾಹ್ನ ಹಾಡಹಗಲೇ ಸಿಗರೇಟ್ ವಿತರಕ(ಡಿಸ್ಟ್ರಿಬ್ಯೂಟರ್)ನ ಮೇಲೆ
ಮಚ್ಚು ಬೀಸಿ ಬೆದರಿಸಿರುವ ದುಷ್ಕರ್ಮಿಗಳು 15 ಲಕ್ಷ ರೂ ದೋಚಿ ಪರಾರಿಯಾಗಿದ್ದಾರೆ.
ಮಧ್ಯಾಹ್ನ 1ರ ವೇಳೆ ಮಚ್ಚು ಬೀಸಿ ಸಿಗರೇಟ್ ಡಿಸ್ಟ್ರಿಬ್ಯೂಟರ್ ಗೋಪಾಲ್ ಮೇಲೆ ದಾಳಿ ನಡೆಸಿದ ಮೂವರು ದುಷ್ಕರ್ಮಿಗಳು ಗನ್ ತೋರಿಸಿ, ಲಾಂಗ್ ಬೀಸಿ,ಪೆಪ್ಪರ್ ಸ್ಪ್ರೇ ಹಾಕಿ 15 ಲಕ್ಷ ರೂ ದೋಚಿ ಪರಾರಿಯಾಗಿದ್ದಾರೆ.ಗೋಪಾಲ್ ಅವರು ಸಿಗರೇಟ್ ಡಿಸ್ಟ್ರಿಬ್ಯೂಟರ್ ಆಗಿದ್ದು, ಕೆಂಗೇರಿಯಲ್ಲಿ ಅಂಗಡಿಗಳಿಂದ ಸಿಗರೇಟ್ ಬಿಲ್ ಕಲೆಕ್ಟ್ ಮಾಡಿಕೊಂಡು ಬರುತ್ತಿದ್ದರು.
ನಾಗರಬಾವಿ ಪಾಪರೆಡ್ಡಿಪಾಳ್ಯಕ್ಕೆ ನಾತೂರಾಮ್ ಎಂಬವರ ಅಂಗಡಿ ಬಳಿ ಸಿಗರೇಟ್ ಬಿಲ್ ಕಲೆಕ್ಟ್ ಮಾಡಲು ಬಂದಿದ್ದಾಗ ಬಂದ ಮೂವರು ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಪೆಪ್ಪರ್ ಸ್ಪ್ರೇ ಹಾಕಿ ಗನ್ ತೋರಿಸಿ ಲಾಂಗ್ ಬೀಸಿದ್ದಾರೆ. ಪ್ರಾವಿಜನ್ ಸ್ಟೋರ್ ಒಳಗೆ ಗೋಪಾಲ್ ಅವರನ್ನು ಅಟ್ಟಾಡಿಸಿದ್ದಾರೆ.
ಲಾಂಗ್ ಬೀಸಿದ ರಭಸಕ್ಕೆ ಹಣವಿದ್ದ ಬ್ಯಾಗ್ ಕಟ್ಟಾಗಿದ್ದು, ಕೂಡಲೇ ಹಣವಿದ್ದ ಬ್ಯಾಗನ್ನು ಹೊತ್ತುಕೊಂಡು ಪರಾರಿಯಾಗಿದ್ದಾರೆ. ಟಾಟಾ ಏಸ್ ವಾಹನದಲ್ಲಿದ್ದ ಡಿಸ್ಟ್ರಿಬ್ಯೂಟರ್ ಗೋಪಾಲ್ ಅವರನ್ನು ದರೋಡೆಕೋರರು ಹಿಂಬಾಲಿಸಿದ್ದರು ಎನ್ನಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.