ರಾಮನಗರ: ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್-ಬಿಜೆಪಿ ಪಕ್ಷಗಳ ಮೈತ್ರಿಯು ಮುಂದುವರಿಯಲಿದೆ, ಈ ಬಗ್ಗೆ ಯಾರಿಗೂ ಸಂಶಯಬೇಡ ಎಂದು ಹಿಂದುಳಿದ ವರ್ಗದ ನಾಯಕರು ಹಾಗೂ ಶಾಸಕ ಬಂಡೆಪ್ಪ ಕಾಶಂಪೂರ್ ತಿಳಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈ-ವೋಲ್ಟೇಜ್ ಕ್ಷೇತ್ರವಾಗಿದೆ. ಕಾಂಗ್ರೆಸ್ನವರಿಗೆ ಗ್ಯಾರಂಟಿಯೇ ಅವರಿಗೆ ಚುನಾವಣೆ ಅಸ್ತ್ರವಾಗಿದೆ. ಉಚಿತ ಗ್ಯಾರಂಟಿ ಯೋಜನೆಗಳೆಂದು ಜನರ ಮೇಲೆ ತೆರಿಗೆ, ಟ್ಯಾಕ್ಸ್, ಬೆಲೆ ಏರಿಕೆ ಮಾಡಿರುವ ಬಗ್ಗೆ ಏಕೆ ಅವರು ಪ್ರಚಾರದಲ್ಲಿ ಹೇಳುತ್ತಿಲ್ಲ.
ಭಾರತ ದೇಶದ ಬೆನ್ನೆಲುಬು ರೈತನಾಗಿದ್ದು, ಅನ್ನದಾತನಿಗೆ ಕಾಂಗ್ರೆಸ್ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು.ಈ ಹಿಂದೆ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಸರ್ಕಾರದ ಹಣದಲ್ಲಿಯೇ ರೈತರ ಸಾಲಮನ್ನಾ ಮಾಡಿದ್ದರು, ಆದರೆ ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರಕ್ಕೆ ಏಕೆ ಪ್ರಸ್ತಾವನೆ ಸಲ್ಲಿಸುತ್ತಿದೆ. ಇದನ್ನು ನೋಡಿದರೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಭಾವಿಸುತ್ತೇನೆ ಎಂದರು.
ನಮ್ಮ ಮೈತ್ರಿ ಅಭ್ಯರ್ಥಿ ದೇಶದ ಬಗ್ಗೆ ಚಿಂತನೆ ಮಾಡಿ ದೇಶವನ್ನು ಮುನ್ನಡೆಸುವುದು ಅವರ ಆಶಯ, ನಾನು ರಾಜಕಾರಣ ಮಾಡಲ್ಲ ಎಂಬ ಅವರ ಮಾತು ನೋಡಿದರೆ ಇಂತಹ ಹೃದಯವಂತನನ್ನು ಆಯ್ಕೆ ಮಾಡಿ ದೇಶಕ್ಕೆ ಒಂದು ಸಂದೇಶ ರವಾನಿಸಿ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ 28 ಸ್ಥಾನಗಳಲ್ಲೂ ಗೆಲ್ಲಲು ಎರಡು ಪಕ್ಷದ ಮುಖಂಡರು ಶ್ರಮಿಸುತ್ತಿದ್ದೇವೆ. ಆಗಾಗಿ ಹಿಂದುಳಿದ ವರ್ಗ ಎಸ್ಸಿ/ಎಸ್ಟಿ ಸಮುದಾಯದವರು ಹೆಚ್ಚಿನ ಮತ ನೀಡಿ ಎಂದು ಹೇಳಿದರು.
ಕರ್ನಾಟಕದಲ್ಲಿ ಪ್ರಾದೆಶಿಕ ಪಕ್ಷ ಅಸ್ಥಿತ್ವವಿದೆ ಎಂಬುದನ್ನು ಜೆಡಿಎಸ್ ಪಕ್ಷ ತೋರಿಸಿದೆ. ಇದರ ಬಗ್ಗೆಯೆ ಕಾಂಗ್ರೆಸ್ ನವರು ಬೆಳಿಗ್ಗೆ ಎದ್ದು ಜಪ ಮಾಡುತ್ತಿರುತ್ತಾರೆ. ಬಿಜೆಪಿಗಿಂತ ಜೆಡಿಎಸ್ ನವರ ಮೇಲೆಯೆ ಅವರಿಗೆ ಭಯ, ಜೆಡಿಎಸ್ ರಾಜ್ಯದಲ್ಲಿ ಜೆಡಿಎಸ್ ಇದೆಯೋ ಇಲ್ಲವೋ ಎಂಬುದು ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಗ್ರಾಪಂ ಸದಸ್ಯ ಮೋಹನ್ರಾಮ್ ಮನ್ನಾರ್, ಮಂಚನಾಯ್ಕನಹಳ್ಳಿ ಗ್ರಾಪಂ ಮಾಜಿ ಸದಸ್ಯ ಶಂಕರ್, ಹಿಂದುಳಿದ ವರ್ಗದ ಮುಖಂಡರಾದ ನಾಗರಾಜು, ರೇಣುಕಪ್ಪ, ಮುಕುಂದರಾಜು, ವಕೀಲ ಯಾದವ್ ಇದ್ದರು.