ಮಾಗಡಿ: ಸಹಕಾರ ಸಂಘಗಳು ಸಾಮಾನ್ಯ ಜನರು ಮತ್ತು ರೈತರ ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹೆಚ್.ಎನ್.ಅಶೋಕ್ ಹೇಳಿದರು.
ಪಟ್ಟಣದ ಬಿಡಿಸಿಸಿ ಬ್ಯಾಂಕ್ ಕಚೇರಿಯ ಸಭಾಂಗಣದಲ್ಲಿ ನಡೆದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅದ್ಯಕ್ಷ ಎಂ.ಕೆ.ಧನಂಜಯ ಮತ್ತು ಹಿರಿಯ ಸಹಕಾರಿಗಳಾದ ಬಾಳೇನಹಳ್ಳಿ ನಂಜೇಗೌಡರನ್ನು ಸನ್ಮಾನಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ರೈತರ ಶ್ರಮಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ.
ಅದರೆ ಸಹಕಾರ ಸಂಘಗಳನ್ನು ಅವಲಂಬಿಸಿಕೊಂಡರೆ ಆರ್ಥಿಕವಾಗಿ ಬಲವರ್ಧನೆಯಾಗಬಹುದು.ಈ ಕ್ಷೇತ್ರವು ಜಾಗತಿಕ ಬೆಳವಣಿಗೆ ಸಂಘಗಳ ಪಾತ್ರ, ಹಕ್ಕು, ಮಹತ್ವ ಕರ್ತವ್ಯ ದೇಶದ ಆರ್ಥಿಕತೆಯ ಸಹಕಾರ ರಂಗಗಳ ಬೆಳವಣಿಗೆ ನಮ್ಮ ಕೊಡುಗೆ ಏನು ಎಂದು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.
ಕಲ್ಯ ವಿ.ಎಸ್.ಎಸ್.ಎನ್.ಸೊಸೈಟಿಯು 25 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದು ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿದೆ.ಆದರೆ ಕರಾವಳಿ ಭಾಗದ ವಿಎಸ್ಎಸ್ಎನ್ ಗಳು ಒಂದು ಸಾವಿರ ಕೋಟಿ ರೂವರೆಗೂ ವ್ಯವಹಾರ ನಡೆಸುತ್ತಿವೆ.ಇಟ್ಟಿಗೆ ಫ್ಯಾಕ್ಟರಿ, ಕೋಳಿ ಫಾರಂ ಮಾಡಲು ವಾರ್ಷಿಕ ಮೂರು ಲಕ್ಷ ರೂನಂತೆ ಹತ್ತು ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ.
ಯುವಕರು ಪಟ್ಟಣದತ್ತ ಮುಖ ಮಾಡದೇ ಇದರ ಸದುಪಯೋಗಪಡಿಸಿಕೊಂಡು ತಮ್ಮ ಸ್ವಗ್ರಾಮದಲ್ಲಿಯೇ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಅಶೋಕ್ ಕರೆ ನೀಡಿದರು.ಜಿಲ್ಲಾ ಸಹಕಾರ ಒಕ್ಕೂಟದ ಅದ್ಯಕ್ಷ ಕಲ್ಕೆರೆ ಧನಂಜಯ ಮಾತನಾಡಿ ಸಾಮಾಜಿಕ ಕಳಕಳಿಯಡಿಯಲ್ಲಿ ಆರಂಭವಾದ ಸಹಕಾರ ಸಂಘಗಳು ಇಂದು ಗ್ರಾಮೀಣ ಪ್ರದೇಶದ ಸಾಮಾನ್ಯ ಜನರಿಗೆ ರೈತರ ಜೀವನ ಮಟ್ಟ ಸುಧಾರಿಸಲು ಸಹಕಾರಿಯಾಗಿವೆ.
ಪ್ರತಿವರ್ಷ ಭಾರತದಾದ್ಯಂತ ರಾಷ್ಟ್ರೀಯ ಸಹಕಾರ ಯೂನಿಯನ್ ಮಾರ್ಗದರ್ಶನದಲ್ಲಿ ನವೆಂಬರ್ 14 ರಿಂದ 20 ರವರೆಗೆ ಸಹಕಾರ ಸಪ್ತಾಹ ನಡೆಯುತ್ತಿದೆ.ಸಹಕಾರ ಕ್ಷೇತ್ರಗಳಲ್ಲಿ ಸಿಗುವ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸದೃಡಗೊಳಿಸಲು ನಾವು ಬದ್ದರಾಗಿದ್ದೇವೆ ಎಂದು ಧನಂಜಯ ಸ್ಪಷ್ಟಪಡಿಸಿದರು.
ಬಮೂಲ್ ನಿರ್ದೇಶಕ ಆಗಲಕೋಟೆ ನರಸಿಂಹಮೂರ್ತಿ, ಟಿಎಪಿಸಿಎಂಎಸ್ ಅದ್ಯಕ್ಷ ಸೋಮಣ್ಣ, ನಿರ್ದೇಶಕರಾದ ಹೆಚ್.ಜೆ.ಪುರುಷೋತ್ತಮ್, ಶಿವಪ್ರಸಾದ್, ಶಿವಕುಮಾರ್, ತಿಗಳರಪಾಳ್ಯ ರಮೇಶ್, ಪಾಪಣ್ಞಸಂಪನ್ಮೂಲ ವ್ಯಕ್ತಿ ರಾಜಣ್ಣ, ಭೂ ಬ್ಯಾಂಕ್ ಅದ್ಯಕ್ಷ ಚಂದ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಣಿಗನಹಳ್ಳಿ ಸುರೇಶ್, ತಾಪಂ ಮಾಜಿ ಅದ್ಯಕ್ಷ ಶಿವರಾಜು, ಚಂದೂರಾಯನಹಳ್ಳಿ ರಾಜಣ್ಣ, ಬಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶಿವಣ್ಣ, ಮಂಚನಬೆಲೆ ಲೋಕೇಶ್ ಸೇರಿದಂತೆ ಮತ್ತಿತರಿದ್ದರು.