ರಾಮನಗರ: ರೈತರು ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇವೆ ಎಂಬ ಹಿಂಜರಿಕೆಯ ಭಾವನೆಯನ್ನು ಬಿಡಿ, ನಿಮ್ಮಗಳಲ್ಲಿ ಆರ್ಥಿಕ ಬದಲಾಣೆ ತರಲು ಬಮೂಲ್ ಆಡಳಿತ ಮಂಡಳಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಬದ್ದರಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ನಗರದ ಆರ್ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ಮತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಹಾಲು ಉತ್ಪಾದಕ ರೈತರಿಗೆ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸವಾಲುಗಳ ಮಧ್ಯೆ ಬದುಕಬೇಕಿದೆ. ಪ್ರತಿಯೊಬ್ಬರಿಗೂ ಅವಕಾಶ ಸಿಗುತ್ತದೆ. ಆದರೆ, ಪ್ರಯತ್ನಗಳು ನಿಲ್ಲಬಾರದು. ಪ್ರಯತ್ನ ನಿಲ್ಲಿಸಿದಾಗ ನೀವು ಮಾಡುವ ಕೆಲಸದಲ್ಲಿ ವಿಫಲರಾಗುತ್ತೀರಿ. ಅದನ್ನು ದುಡಿಮೆಯ ಶಕ್ತಿಯಿಂದ ಸುಲಭ ಮಾಡಿಕೊಳ್ಳಬೇಕೆಂದು ಹಾಲು ಉತ್ಪಾದಕರಿಗೆ ಕಿವಿಮಾತು ಹೇಳಿದರು.
ಬೆಂಗಳೂರು ಹಾಲು ಒಕ್ಕೂಟದಿಂದ ಸುಮಾರು 3354 ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇವೆ. ರಾಮನಗರ ತಾಲ್ಲೂಕಿನಲ್ಲಿ 1 ಕೋಟಿ 19 ಲಕ್ಷ ರುಪಾಯಿ ಪ್ರೋತ್ಸಾಹಧನ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಯೊಂದಿಗೆ ಚರ್ಚಿಸಿ ಇನ್ನೂ ಹೆಚ್ಚಿನ ಮಕ್ಕಳನ್ನು ಪ್ರತಿಭಾ ಪುರಸ್ಕಾರಕ್ಕೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಚಿಂತನೆ ನನ್ನದಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಬಹುತೇಖ ರೈತರು ಹೈನುಗಾರಿಕೆ ಕ್ಷೇತ್ರವನ್ನು ನಂಬಿ ಬದುಕು ನಡೆಸುತ್ತಿದ್ದಾರೆ. ಅವರಿಗೆ ಆರ್ಥಿಕ ಮೂಲ ಸಹ ಆಗಿದೆ. ಹಸುಗಳನ್ನು ತಮ್ಮ ಮಕ್ಕಳಂತೆ ಪೋಷಣೆ ಮಾಡಬೇಕು. ಹೆಚ್ಚು ಇಳುವರಿ ಬರುವ ಹಸುಗಳನ್ನು ಸಾಕಾಣೆ ಮಾಡಿ, ಬಮೂಲ್ ವತಿಯಿಂದ ಈಗಿರುವ 80 ಸಾವಿರ ರೂ ಹಸುವಿಗೆ ಆರೋಗ್ಯ ವಿಮೆಯ ಹಣವನ್ನು 1 ಲಕ್ಷದ 20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೆಣ್ಣು ಕರುಗಳು ಜನಿಸುವಂತೆ ಸೆವೆನ್ಸ್ ಅಭಿವೃದ್ದಿ ಪಡಿಸಲಾಗಿದೆ. ಒಂದು ಮನೆಯಲ್ಲಿ ಒಂದು ಹೆಣ್ಣು ಕರು ಜನಿಸಿದರೆ 1 ಲಕ್ಷ ರೂ ಆದಾಯ ಬಂದAತೆ ಎಂದು ಹೇಳಿದರು.
ಶಿಕ್ಷಣದ ಗುಣಮಟ್ಟ ಸುಧಾರಿಸಿದಂತೆ ಪೈಪೋಟಿಯೂ ಸಹ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ವಿಶ್ವದ ಜೊತೆ ಸ್ಪರ್ಧೆ ಮಾಡಲು ಅಣಿಯಾಗಬೇಕಿದೆ. ಇದಕ್ಕಾಗಿ ಆಯ್ಕೆಗಳು ಸರಿಯಾಗಿ ಇರಬೇಕು. ಅದನ್ನು ಬಿಟ್ಟು ಮೊಬೈಲ್ ನೋಡಿಕೊಂಡು ಕಾಲ ಕಳೆದರೆ ಪ್ರಯೋಜನವಿಲ್ಲ. ಮೊಬೈಲ್ ಅನ್ನು ಅವಶ್ಯಕತೆಗೆ ಅನುಗುಣ ವಾಗಿ ಬಳಸಬೇಕು. ಮಕ್ಕಳ ಚಿಂತನೆ ಬದುಕು ಸೃಷ್ಟಿ ಮಾಡಿಕೊಳ್ಳುವ ರೀತಿಯಲ್ಲಿ ಇರಬೇಕು. ನಿಮ್ಮ ಕೈಯಲ್ಲಿರುವ ತಂತ್ರಜ್ಞಾನವನ್ನು ಜೀವನ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು. ಎಐ ತಂತ್ರಜ್ಞಾನಕ್ಕೆ ಪರ್ಯಾಯ ಮತ್ತೊಂದು ಆವಿಷ್ಕಾರವನ್ನು ಹುಡುಕಬೇಕು ಎಂದು ಕಿವಿಮಾತು ಹೇಳಿದರು.
ಬಮೂಲ್ ನಿರ್ದೇಶಕ ಪಿ.ನಾಗರಾಜ್ ಮಾತನಾಡಿ ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರ ಮನವೊಲಿಸಿ ಮೂರು ಬಾರಿ ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರನ್ನು ಬೆಂಗಳೂರು ಹಾಲು ಒಕ್ಕೂಟಕ್ಕೆ ಅಧ್ಯಕ್ಷರನ್ನಾಗಿ ಮಾಡಿದೆವು. ಸಹಕಾರಿ ಕ್ಷೇತ್ರದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಮೂಲಕ ಹಾಲು ಉತ್ಪಾದಕರಿ ಹಾಗೂ ಹೈನುಗಾರಿಕೆ ಕ್ಷೇತ್ರದ ಅವಲಂಬಿತರಿಗೆ ಹಲವು ಯೋಜನೆಗಳನ್ನು ಸಾಕಾರ ಮಾಡುವ ಜೊತೆಗೆ ಅನುಕೂಲಗಳನ್ನು ಕಲ್ಪಿಸಿದ್ದಾರೆ. ಎಂದರು.
ಡಿ.ಕೆ.ಸುರೇಶ್ ಅವರಿಗೆ ಕೆಲಸ ಮಾಡುವ ಛಲ ಇದೆ. ರೈತರ ಬಗೆಗೆ ಕಾಳಜಿ ಇದೆ. ಅಷ್ಟೇ ಅಲ್ಲದೆ ಉತ್ಪಾದನೆ, ಮಾರುಕಟ್ಟೆ ಬಗ್ಗೆ ಅನುಭವ ಹಾಗೂ ಅಪಾರ ಜ್ಞಾನವಿದೆ. ಒಂದು ಪೈಸೆವನ್ನು ಲೆಕ್ಕ ಹಾಕಿ ಬಮೂಲ್ ಅನ್ನು ಲಾಭದತ್ತ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಈ ವರ್ಷ 60 ಕೋಟಿ ರೂ ಲಾಭ ಗಳಿಸಿದೆ. ನಾನು ಬಮೂಲ್ ಅಧ್ಯಕ್ಷನಾಗಿದ್ದಾಗ ಹೈನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಂಕಲ್ಪ ತೊಟ್ಟು ಬಮೂಲ್ ಕಲ್ಯಾಣ ಟ್ರಸ್ಟ್ ಸ್ಥಾಪಿಸಿದೆ. ಅದರಿಂದ ಪ್ರತಿವರ್ಷ ಸಾವಿರಾರು ಮಕ್ಕಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ, ಪಶು ಆಹಾರದಲ್ಲಿ ಕ್ರಾಂತಿ, ಹಾಲಿಗೆ ಪ್ರೋತ್ಸಾಹಧನ, ನೂತನ ಸಂಘಗಳ ರಚನೆ ಮಾಡಿದ ಕೆಲಸಗಳು ನನಗೆ ತೃಪ್ತಿ ನೀಡಿದೆ ಎಂದು ಮೆಲಕು ಹಾಕಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್, ರಾಮನಗರ ಶಿಬಿರ ವ್ಯವ ಸ್ಥಾಪಕ ಡಾ.ಗಣೇಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿಮಂಜು, ಜಿಪಂ ಮಾಜಿ ಅಧ್ಯಕ್ಷ ರಮೇಶ್, ತಾಪಂ ಮಾಜಿ ಅಧ್ಯಕ್ಷರಾದ ಡಿ.ಎಂ.ಮಹದೇವಯ್ಯ, ಪ್ರಾಣೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ಬಿಡದಿ ಮತ್ತು ಕೂಟಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಗಂಗಾಧರ್ಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಯ್ಯ, ಪ್ರಭು, ಮುಖಂಡರಾದ ಜಯಣ್ಣ, ಬೈರೇಗೌಡ, ಕೆ.ರವಿ, ಕೆಂಪರಾಮು ಆಂಜನಪ್ಪ ಇದ್ದರು.
ಪ್ರತಿಯೊಬ್ಬರು ಸವಾಲುಗಳ ಮಧ್ಯೆ ಬದುಕಬೇಕಿದೆ: ಡಿ.ಕೆ.ಸುರೇಶ್



