ರಾಮನಗರ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.ತಾಲ್ಲೂಕಿನ ಕಸಬಾ ಹೋಬಳಿ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳಲ್ಲಿ ಸುಮಾರು 5 ಕೋಟಿ ರು.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕೇತೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಹುಟ್ಟುಹಬ್ಬ ದಿನವಾದ ಮೇ 15ರಂದು ಮುಖ್ಯಮಂತ್ರಿ ಆಗುವುದು ಫಿಕ್ಸ್. ಇದೇ ನಾನು ಹೇಳುವ ಅಂತಿಮ ದಿನಾಂಕ ಎಂದು ರಾಮನಗರ ಕ್ಷೇತ್ರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು. ಈ ಹಿಂದೆ ನಾನು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಕುರಿತು ಎರಡು ಮೂರು ದಿನಾಂಕಗಳನ್ನು ಹೇಳಿದ್ದೆ. ಆದರೀಗ ಮೇ 15 ಅಂತಿಮ ದಿನಾಂಕ. ಈ ಅವಧಿಯಲ್ಲಿಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಅವರಿಗೆ ಅವಕಾಶ ಸಿಗಬೇಕು ಎಂಬುದು ಎಲ್ಲರ ಬಯಕೆಯಾಗಿದೆ ಎಂದರು.ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯೇ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಸಿಗುತ್ತದೆ ಎಂಬ ವಿಶ್ವಾಸವಿದೆ. ಅವರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ. ಡಿಕೆಶಿ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ನೋಡಬೇಕು ಅಂತ ಸಾಕಷ್ಟು ಸಚಿವರು, ಶಾಸಕರು, ಪಕ್ಷದ ಕಾರ್ಯಕರ್ತರು ಹಾಗೂ ಜನರ ಆಸೆಯಾಗಿದೆ. ಹೀಗಾಗಿ ಮೇ 15ರೊಳಗೆ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸಿಗುತ್ತದೆ ಎನ್ನುವ ಅಭಿಲಾಷೆ ಇದೆ ಎಂದು ಹೇಳಿದರು.ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸುವಂತೆ ವರಿಷ್ಠರಲ್ಲಿ ಮನವಿ ಮಾಡುವುದಾಗಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಹಾಗೆಯೇ ರಾಜಣ್ಣರವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ರಾಜಕಾರಣದಲ್ಲಿ ವಿಭಿನ್ನ ಅಭಿಪ್ರಾಯ ಇರುವುದು ಸಹಜ. ಬೇರೆಯವರ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ನಾಯಕರಿಗೆ ಈ ಅವಧಿಯಲ್ಲಿ ಅವಕಾಶ ಸಿಗಬೇಕು ಎಂದಷ್ಟೇ ಕೇಳುತ್ತಿದ್ದೇನೆ ಎಂದರು.ಸಚಿವರಾದ ಸತೀಶ್ ಜಾರಕಿಹೋಳಿ ಹಾಗೂ ಎಚ್.ಸಿ.ಮಹಾದೇವಪ್ಪರವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಅವರಿಬ್ಬರು ನಮ್ಮ ಹಿರಿಯ ನಾಯಕರು, ಸಚಿವರು. ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ. ತಮ್ಮ ಕಷ್ಟ- ಸುಖದ ಜೊತೆಗೆ ರಾಜ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಚರ್ಚಿಸಲು ಹೋಗಿರಬಹುದು. ಅವರು ಯಾವ ವಿಚಾರವಾಗಿ ಚರ್ಚಿಸಲು ಹೋಗಿದ್ದಾರೊ ನನಗೆ ಗೊತ್ತಿಲ್ಲ ಎಂದು ಹೇಳಿದರು.ಡಿ.ಕೆ.ಶಿವಕುಮಾರ್ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಚರ್ಚೆಗೆ ಬಂದಾಗಲೆಲ್ಲ ಪಕ್ಷದೊಳಗೆ ಗುಂಪುಗಾರಿಕೆ ಆರಂಭವಾಗುತ್ತದೆಯಲ್ಲ ಎಂಬ ಪ್ರಶ್ನೆಗೆ ಯಾವ ಕ್ಷೇತ್ರದಲ್ಲಿ ಗುಂಪುಗಾರಿಕೆ ಇಲ್ಲ.ಎಲ್ಲಾ ಕ್ಷೇತ್ರ, ಜಾತಿಗಳಲ್ಲಿ ಗುಂಪುಗಾರಿಕೆ ಇದೆ. ರಾಜಕೀಯವೂ ಗುಂಪುಗಾರಿಕೆಯಿಂದ ಹೊರತಾಗಿಲ್ಲ. ನಾವು ರಾಜಕಾರಣದಲ್ಲಿ ಒಂದು ಬದಲಾವಣೆ ಆಗಲಿ ಅಂತ ಬಯಸಿದ್ದೀವಿ ಅಷ್ಟೇ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು. ತಾಲ್ಲೂಕು ಅಧ್ಯಕ್ಷ ವಿ.ಹೆಚ್ ರಾಜು. ಮಾಯಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷರಾದ ಶೋಭಾ. ರಂಜಿತ್, ಕೇತೋಹಳ್ಳಿ ಕಾಂಗ್ರೆಸ್ ಮುಖಂಡ ಪರಮಶಿವಯ್ಯ. ಶಿವಲಿಂಗಯ್ಯ. ರೇವಣ್ಣ ಮುಂತಾದವರು ಉಪಸ್ಥಿತರಿದ್ದರು.
ನಾನು ಶಾಸಕನಾಗಿ ಅಲ್ಲ, ಜನರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಶಾಸಕರನ್ನಾಗಿ ಮಾಡಿದ್ದಾರಲ್ಲ ಅದೇ ನನ್ನ ಅದೃಷ್ಟ. ಇದಕ್ಕಿಂತ ಬೇರೇನೂ ನನಗೆ ದೊಡ್ಡದಲ್ಲ. ನನ್ನ ಕ್ಷೇತ್ರದಲ್ಲಿ ನಾನೇ ಮುಖ್ಯಮಂತ್ರಿ, ನಾನೇ ಸಚಿವ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ.ನನಗೆ ಜನರ ಪ್ರೀತಿ, ವಿಶ್ವಾಸವೇ ಸಾಕು ಬೇರೆ ಯಾವ ಸ್ಥಾನವೂ ಬೇಡ.
– ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ.
`ಮೇ 15ರಂದು ಡಿಕೆಶಿ ಸಿಎಂ ಆಗುವುದು ಫಿಕ್ಸ್’



