ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದೇಶದಂತೆ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡವಿರಬೇಕು ಎಂಬ ನಿಯಮವಿದ್ದರು ಸಹ ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಹಾಕದಿರುವ ಕಾರಣ ಹೋರಾಟ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ್ರು ಮತ್ತು ಕರವೇ ಕಾರ್ಯಕರ್ತರನ್ನು ಬಂಧಿಸಿರುವುದು ಸಮಸ್ತ ಕನ್ನಡಿಗರಿಗೆ ನೋವುಂಟಾಗಿದೆ.
ಸಾರಿಗೆ ನೌಕರರ ಸಂಕಷ್ಟಕ್ಕೆ ಗೌಡ್ರು ಅನೇಕ ಬಾರಿ ಧ್ವನಿಯಾಗಿದ್ದಾರೆ, ಅಂತಾರಾಜ್ಯ ಸಾರಿಗೆ ವ್ಯವಸ್ಥೆಗೆ ಹೊರ ರಾಜ್ಯಗಳಿಗೆ ತೆರಳುವ ಬಸ್ಸುಗಳಿಗೆ ಅಲ್ಲಿಯ ಸ್ಥಳೀಯರು ದಾಳಿ ಮಾಡಿದ ಅನೇಕ ಸಂದರ್ಭಗಳಲ್ಲಿ ಸನ್ಮಾನ್ಯ ನಾರಾಯಣಗೌಡ್ರು ರಾಜ್ಯಾದ್ಯಂತ ಹೋರಾಟ ಮಾಡಿ ಸಾರಿಗೆ ನೌಕರರಿಗೆ ಧೈರ್ಯ ತುಂಬಿದ್ದಾರೆ. ಕಳೆದ 35 ವರ್ಷ ಗಳಿಂದ ಕನ್ನಡ- ಕನ್ನಡಿಗ-ಕರ್ನಾಟಕ ಉಳಿವಿಗಾಗಿ ಹಗಲಿರುಳು ಎನ್ನದೆ ಶ್ರಮಿಸಿದ್ದಾರೆ, ಪರಭಾಷಿಕರ ಮಧ್ಯೆ ಕನ್ನಡಿಗರು ಬೆಂಗಳೂರಿನಲ್ಲಿ ಧೈರ್ಯವಾಗಿ ಎದೆಯುಬ್ಬಿಸಿ ನಾನು ಕನ್ನಡಿಗ ಎಂದು ಹೇಳಿಕೊಳ್ಳಲು ನಾರಾಯಣಗೌಡ್ರು ಮತ್ತು ಕನ್ನಡ ಹೋರಾಟಗಾರರೆ ಕಾರಣ.
ಈ ನಾಡು ಕಂಡ ಅಪ್ರತಿಮ ಹೋರಾಟಗಾರ, ನಾಡು ನುಡಿ ನೆಲ ಜಲ ಭಾಷೆ ಮತ್ತು ನಾಡಿನ ಸಂಸ್ಕೃತಿಯ ರಕ್ಷಣೆಗೆ ಜೀವನವನ್ನೇ ಮುಡಿಪಾಗಿಟ್ಟಿರುವ ನಾಡಿನ ಹಿರಿಯ ಕನ್ನಡ ಪರ ಹೋರಾಟಗಾರರಾದ ಟಿ.ಎ.ನಾರಾಯಣಗೌಡ್ರು ಮತ್ತು ಕರವೇ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕೃಷಿ ಪ್ರತಿಷ್ಠಾನವು ಒತ್ತಾಯಿಸುತ್ತದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕೃಷಿ ಪ್ರತಿಷ್ಠಾನ (ನೊಂ) ಅಧ್ಯಕ್ಷ ಪ್ರೀತಮ್ ಕೆ.ಎಸ್. ತಿಳಿಸಿದ್ದಾರೆ.