ಪೀಣ್ಯ ದಾಸರಹಳ್ಳಿ: ಪೀಣ್ಯಾದ ವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ ಶಾಲೆಯ 10ನೇ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಕರ್ನಾಟಕ ಸಾಂಸ್ಕೃತಿಕ ವೈಭವ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವಿದ್ಯಾರ್ಥಿಗಳು ಅನೇಕ ಜನಪದ ಕಲೆಗಳ ನೃತ್ಯವನ್ನು ಮೆರವಣಿಗೆಯ ಮೂಲಕ ಪ್ರದರ್ಶಿಸಿದರು. ಕಳಶ, ಚಂಡೆ, ಮದ್ದಳೆ,ಡೊಳ್ಳು ಕುಣಿತ, ನಂದಿಕೋಲು, ಕೀಲು ಕುದುರೆ, ಹುಲಿ ಕುಣಿತ, ವೀರಗಾಸೆ, ಯಕ್ಷಗಾನ, ಭರತನಾಟ್ಯ ಹೀಗೆ ಹಲವು ಜನಪದ ಕಲೆಗಳನ್ನು ಮೆರವಣಿಗೆಯ ಮೂಲಕ ಮಕ್ಕಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಾ ಹೋದರು.
ಕೆಲವು ವಿದ್ಯಾರ್ಥಿಗಳು ವಾಹನಗಳಲ್ಲಿ ಪ್ರಸಿದ್ಧ ಕವಿಗಳ ವೇಷಭೂಷಣ ಹಾಗೂ ನಮ್ಮ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳು ಹಾಗೂ ವಿವಿಧ ಸಾಂಪ್ರದಾಯಿಕ ಉಡುಗೆಗಳನ್ನು ಪ್ರತಿಬಿಂಬಿಸುವ ವೇಷಭೂಷಣಗಳನ್ನು ಪ್ರದರ್ಶಿಸಿದರು.ಧ್ವನಿ ಮಾಯೆ ಕಲಾವಿದೆ ಇಂದುಶ್ರೀ ರವೀಂದ್ರ ಅವರು ಧ್ವನಿ ಮಾಯೆ ಮೂಲಕ ಬಸ್ಯಾ, ತಾತ, ಡಿಂಕೂ ಹೀಗೆ ತಮ್ಮ ಹಾಸ್ಯಭರಿತ ಮಾತಿನಿಂದ ಪ್ರೇಕ್ಷಕರ ಮನಸೂರೆಗೊಂಡರು. ರಾಜ್ಯದ ಕರಾವಳಿಯ ಹೆಮ್ಮೆಯ ಯಕ್ಷಗಾನವನ್ನು ಕುಂದಾಪುರದ ಯಕ್ಷಗಾನ ಕಲಾವಿದರು ಅಭಿನಯಿಸಿ ತೋರಿಸಿದರು. ಅವರ ನೃತ್ಯ, ಸಂಭಾಷಣೆ ಎಲ್ಲರನ್ನೂ ಬೆರಗುಗೊಳಿಸಿತು.
ಯಕ್ಷಗಾನ ಕಲಾವಿದರಿಂದ ಕೃಷ್ಣನ ಯುದ್ಧ ಪ್ರಸಂಗವನ್ನು ಅಭಿನಯಿಸುವುದರ ಮೂಲಕ ಪ್ರೇಕ್ಷಕರ ಮನವನ್ನು ಗೆದ್ದರು.
ಮೆರವಣಿಗೆಯು ಶಾಲೆಯಿಂದ ಹೊರಟು ತುಮಕೂರು ರಸ್ತೆಯ ಜಾಲಹಳ್ಳಿಕ್ರಾಸ್ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಂಕ್ಷನ್ ಕಡೆಗೆ ಸಾಗಿ ಬಂದಿತು. ಎಲ್ಲರೂ ನಮ್ಮ ಮಕ್ಕಳ ಜನಪದ ಕಲೆಗಳನ್ನು ನೋಡಿ ಆನಂದಿಸಿದರು.
ವಿದ್ಯಾಸೌಧ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ಮಂಜೇಗೌಡ ‘ನಮ್ಮ ಶಾಲೆಯಲ್ಲಿ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಮೌಲ್ಯಗಳನ್ನು ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸಲು ಕನ್ನಡ ನಾಡಿನ ಪರಂಪರೆಯನ್ನು ಹೊರ ತರುವ ಸಲುವಾಗಿ ಕರ್ನಾಟಕ ಸಾಂಸ್ಕೃತಿಕ ವೈಭವ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ’ ಎಂದರು.