ಬೆಂಗಳೂರು: ಇತ್ತೀಚೆಗೆ ನಡೆದ ಲೋಕಸಭಾ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಬಿಜೆಪಿ ಮುಖಂಡರಾದ ಕೆ.ಎಸ್. ಈಶ್ವರಪ್ಪ ಹಾಗೂ ರಘುಪತಿ ಭಟ್ ಮರಳಿ ಪಕ್ಷಕ್ಕೆ ಸೇರ್ಪಡೆಯಾಗಲು ವೇದಿಕೆ ಸಜ್ಜುಗೊಳ್ಳುತ್ತಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಸ್ಫರ್ಧೆ ಮಾಡಿದ್ದರೆ, ಇತ್ತ ವಿಧಾನಪರಿಷತ್ ಚುನಾವಣೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಸ್ಫರ್ಧಿಸಿದ್ದರು.ಈ ಇಬ್ಬರ ರಾಜಕೀಯ ಭವಿಷ್ಯ ಏನು? ಎಂಬ ಬಗ್ಗೆ ಚರ್ಚೆ ಆರಂಭಗೊಂಡಿದೆ. ಈ ಇಬ್ಬರನ್ನು ಬಿಜೆಪಿಯಿಂದ ಅಮಾನತು ಮಾಡಿಪಕ್ಷದ ಶಿಸ್ತು ಸಮಿತಿ ಆದೇಶ ಹೊರಡಿಸಿತ್ತು.
ಈ ಇಬ್ಬರು ನಾಯಕರು ಮತ್ತೆ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ಚರ್ಚೆಯೂ ತೆರೆಮರೆಯಲ್ಲಿ ಆರಂಭಗೊಂಡಿದೆ. ಆದರೆ, ಹೇಗೆ ಅವರು ಬಿಜೆಪಿ ಸೇರುತ್ತಾರೆ ಎಂಬ ಪ್ರಶ್ನೆಯೂ ಎದುರಾಗಿದೆ.ಯಾವಾಗ ಅವರನ್ನು ಬಿಜೆಪಿ ಕರೆತರಲಾಗುತ್ತೆ? ಎಂಬ ಕುತೂಹಲ ಒಂದೆಡೆಯಾದರೆ ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಲು ಯಾರು ಈ ನಿರ್ಧಾರ ಮಾಡುತ್ತಾರೆ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸಬೇಕಾಗಿರುವುದು ಬೇರೆ ಯಾರು ಅಲ್ಲ. ಹೈಕಮಾಂಡ್ ನಾಯಕರು.ಹೈಕಮಾಂಡ್ ನಾಯಕರ ಗ್ರೀನ್ಸಿಗ್ನಲ್ ಸಿಕ್ಕರೇ ಮಾತ್ರ ಈ ಇಬ್ಬರು ನಾಯಕರು ಪಕ್ಷ ಸೇರ್ಪಡೆಯಾಗಬಹುದು. ಹಾಗಾದ್ರೆ, ಈ ಇಬ್ಬರು ನಾಯಕರಿಗೂ ಹೈಕಮಾಂಡ್ ನಾಯಕರು ಓಕೆ ಅಂತಾರಾ? ಇಲ್ವಾ? ಎಂಬುದು ಸಹ ಚರ್ಚೆಗೆ ಗ್ರಾಸವಾಗಿದೆ.
ಸದ್ಯ ಇಬ್ಬರು ನಾಯಕರು ತೆರೆಮರೆಯಲ್ಲಿ ಮಾಡುತ್ತಿರುವುದಾದ್ರೂ ಏನು? ಎಂಬುದರ ಬಗ್ಗೆ ಮೂಲಗ ಪ್ರಕಾರಇಬ್ಬರು ನಾಯಕರು ಕೂಡ ತೆರೆಮರೆಯಲ್ಲಿ ಪಕ್ಷ ಸೇರ್ಪಡೆಗೆ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ.ರಾಜ್ಯ ನಾಯಕರ ಸಂಪರ್ಕಕ್ಕೆ ಬಾರದೇ ನೇರವಾಗಿ ಹೈಕಮಾಂಡ್ ನಾಯಕರ ಮಟ್ಟದಲ್ಲೇ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಎಲ್ಲವೂ ಅಂದುಕೊಂಡಂತೆ ಆದರೆ, ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಬೇಕಾಗಿರುವ ಉಪ-ಚುನಾವಣೆಗೂ ಮುನ್ನಾ ಪಕ್ಷ ಸೇರ್ಪಡೆ ಎಂಬ ಮಾತುಗಳು ಆರಂಭವಾಗಿದೆ.