ಬೆಂಗಳೂರು: ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಅವರು ಈಶಾನ್ಯ ಭಾರತದಲ್ಲಿ ಆಯುಷ್ ಕ್ಷೇತ್ರವನ್ನು ವೃದ್ಧಿಸುವ ನಾಲ್ಕು ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಿದರು.
ಈಶಾನ್ಯ ಪ್ರದೇಶದಲ್ಲಿ ಪ್ರಥಮವಾಗಿ ವಿಶೇಷ ಪಂಚಕರ್ಮ ಬ್ಲಾಕ್ಅನ್ನು ಗುವಾಹಟಿಯಲ್ಲಿನ ಸೆಂಟ್ರಲ್ ಆಯುರ್ವೇದ ಸಂಶೋಧನಾ ಸಂಸ್ಥೆ(ಸಿಎಆರ್ಐ)ಯಲ್ಲಿ ಸರ್ಬಾನಂದ ಸೋನೋವಾಲ್ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಆಯುಷ್ ಗಾಗಿ ಅತ್ಯಾಧುನಿಕ ಫಾರ್ಮಕಾಲಜಿ ಮತ್ತು ಬಯೋ ಕೆಮಿಸ್ಟ್ರಿ ಲ್ಯಾಬ್ ಈ ಪ್ರದೇಶದಲ್ಲಿ ಮೊದಲನೆಯದಾಗಿದೆ.
ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಅವರು ನಗರದ ಅಜಾರಾದಲ್ಲಿ ಇಂಟಿಗ್ರೇಟೆಡ್ ಆಯುಷ್ ವೆಲ್ನೆಸ್ ಸೆಂಟರ್ ಜೊತೆಗೆ ಹೋಮಿಯೋಪತಿ ಪ್ರಾದೇಶಿಕ ಸಂಶೋಧನಾ ಸಂಸ್ಥೆ (ಆರ್ಆರ್ಐಹೆಚ್) ಕಾಯಂ ಕ್ಯಾಂಪಸ್ಗೆ ವರ್ಚುವಲ್ ಕಾರ್ಯಕ್ರಮದ ಮೂಲಕ ಅಡಿಪಾಯ ಹಾಕಿದರು. ಇಂಟಿಗ್ರೇಟೆಡ್ ಆಯುಷ್ ವೆಲ್ನೆಸ್ ಸೆಂಟರ್ ದೇಶದಲ್ಲೇ ಈ ಬಗೆಯ ಮೊದಲ ಕೇಂದ್ರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಾಯಕತ್ವದಲ್ಲಿ, ಸಾಂಪ್ರದಾಯಿಕ ಔಷಧ ಪದ್ಧತಿ ಮರು ಹುಟ್ಟು ಪಡೆದಿದೆ. ಇದರಿಂದಾಗಿ ದೇಶದ ಆರೋಗ್ಯ ವಿತರಣಾ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಿದೆ.
ಹೊಸ ಪಂಚಕರ್ಮ ಬ್ಲಾಕ್ ಮತ್ತು ಆಯುಷ್ ಗಾಗಿ ಅತ್ಯಾಧುನಿಕ ಪ್ರಯೋಗಾಲಯಗಳು ಈ ಪ್ರದೇಶದಲ್ಲಿ ಆಯುಷ್ಆರೋಗ್ಯ ವಿತರಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಹಂತಗಳಾಗಿವೆ, ಇದು ಅಸ್ಸಾಂ ಮತ್ತು ಈಶಾನ್ಯದ ಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ” ಎಂದು ಬಣ್ಣಿಸಿದರು.