ಅನೇಕ ಮಹಿಳಾ ಸಂಘಗಳಿವೆ ಆದರೆ ವಾತ್ಸಲ್ಯ ಮಹಿಳಾ ಸಂಘ ಎಲ್ಲಕ್ಕಿಂತ ಭಿನ್ನ ಮತ್ತು ವಿಷೇಶ ಎನ್ನಲು ಅನೇಕ ಕಾರಣಗಳಿವೆ.ಮೊದಲನೆಯದಾಗಿ ಈ ಸಂಘ ಹುಟ್ಟಿದ ಮತ್ತು ಬೆಳೆದು ಬಂದ ಹಾದಿ ಅದ್ಭುತ ಮತ್ತು ಅಸಾಧಾರಣ.ಬೆಂಗಳೂರು ವಿಜಯನಗರದಲ್ಲಿ 1981ರಲ್ಲಿ ಸ್ಥಾಪಿತವಾದ ಮೊಟ್ಟ ಮೊದಲ ಮಹಿಳಾ ಸಂಘ ಎನ್ನುವ ಹಿರಿಮೆ ಈ ಸಂಘಕ್ಕಿದೆ. ಸುಮಾರು 40 ವರ್ಷಗಳ ಹಿಂದೆ ಮಹಿಳೆಯರ ಜೀವನ ಶೈಲಿ ಮನೆಯೊಳಗೆ ಮಾತ್ರ ಸೀಮಿತವಾಗಿತ್ತು.ಆ ಕಾಲಘಟ್ಟದಲ್ಲಿ ಆಧುನಿಕ ವಿಚಾರವಂತ ಮಹಿಳೆಯರು ಧೈರ್ಯವಾಗಿ ಒಂದು ಮಹಿಳಾ ಸಂಘವನ್ನು ಕಟ್ಟಿ ತಮ್ಮ ಶಕ್ತಿ ,ಶ್ರಮ, ಶ್ರದ್ಧೆ ,ಸಮಯದ ಜೊತೆಗೆ ಅರ್ಪಣಾ ಭಾವದಿಂದ ಆರ್ಥಿಕವಾಗಿಯೂ ಕೈ ಜೋಡಿಸಿ ಈ ಮಹಿಳಾ ಸಂಘ ಕಟ್ಟಿರುವುದು ಒಂದು ಮಹತ್ ಸಾಧನೆ ಎನ್ನುವುದು ನಿಸ್ಸಂದೇಹ.
ಎಲ್ಲಾ ಮಹಿಳಾ ಸಂಘದಂತೆ ಈ ಮಹಿಳಾ ಸಂಘದ ಸ್ಥಾಪನೆಯ ಉದ್ದೇಶ ಮಹಿಳೆಯರ ಯಾಂತ್ರಿಕ ಜೀವನ ಶೈಲಿಯಲ್ಲಿ ಹೊಸ ಚೈತನ್ಯ ತುಂಬುವುದು. ನೃತ್ಯ ,ಸಂಗೀತ, ಆಟ, ಪ್ರವಾಸ ಈ ರೀತಿಯ ಎಲ್ಲಾ ಮನೋರಂಜನೆ ಈ ಮಹಿಳಾ ಸಂಘದಲ್ಲಿದೆ.ಮಹಿಳಾ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ, ಪುರಂದರ ತ್ಯಾಗರಾಜರ ಆರಾಧನೆಗಳು ಹೀಗೆ ಅನೇಕ ನಿಯಮಿತ ಕಾರ್ಯಕ್ರಮಗಳನ್ನು ವಾತ್ಸಲ್ಯ ಮಹಿಳಾ ಸಂಘದವರು ನಡೆಸಿಕೊಂಡು ಬರುತ್ತಿದ್ದಾರೆ. ಈ ಸಾಮಾನ್ಯ ಚಟುವಟಿಕೆಗಳ ಜೊತೆಗೆ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಭಗವದ್ಗೀತೆ, ಭಜಗೋವಿಂದಮ್, ಉಪನಿಷತ್ ವ್ಯಾಖ್ಯಾನ ಹೀಗೆ ಅಧ್ಯಾತ್ಮಿಕ ಕಲಿಕೆಯ ತರಗತಿಗಳು ನಡೆಯುತ್ತಿವೆ. ಈ ರೀತಿಯ ಅಧ್ಯಾತ್ಮಿಕ ಚಿಂತನೆಗಳಿAದ ಮನಃಶಾಂತಿ ಮತ್ತು ಮನಃಸ್ಥೈರ್ಯ ವೃದ್ಧಿಯಾಗುತ್ತದೆ. ಒಟ್ಟಿನಲ್ಲಿ ಸದಸ್ಯರ ಸರ್ವತೋಮುಖ ಚಟುವಟಿಕೆ ಮತ್ತು ಮನೋರಂಜನೆ ಸಂಘದ ಮುಖ್ಯ ಗುರಿಯಾಗಿದೆ.
ಪ್ರಾರಂಭದ ಕೆಲವೇ ವರ್ಷಗಳಲ್ಲಿ ಅಧ್ಯಕ್ಷರಾಗಿದ್ದ ಪ್ರಭಾವಿ ಮತ್ತು ಪ್ರತಿಷ್ಠಿತ ಮಹಿಳೆಯರ ಶ್ರಮ ಮತ್ತು ಶ್ರದ್ಧೆಯಿಂದ ಮಹಿಳಾ ಸಂಘವು ತನ್ನದೇ ಕಟ್ಟಡವನ್ನು ಕಟ್ಟುವ ಸಾಧನೆ ಮಾಡಿ ಸ್ವಂತ ಕಟ್ಟಡ ಹೊಂದಿರುವ ಪ್ರತಿಷ್ಠಿತ ಮಹಿಳಾ ಸಂಘ ಎನಿಸಿಕೊಂಡಿದೆ. ಅಷ್ಟೇ ಅಲ್ಲದೆ ಸಾರ್ಥಕ 25 ವರ್ಷ ಪೂರೈಸಿ ಅನೇಕ ಪ್ರಭಾವಿ ಗಣ್ಯರ ಹಾರೈಕೆಯೊಂದಿಗೆ ರಜತ ಮಹೋತ್ಸವದ ಮೊದಲ ಮಹಡಿ ಸಭಾಂಗಣ ಕಟ್ಟಡ ಕಟ್ಟಿ ಸಾರ್ಥಕತೆ ಮೆರೆದಿದೆ. ಆ ಕಟ್ಟಡಕ್ಕೆ “ಅಧ್ಯಕ್ಷರ ಸಭಾಂಗಣ”ವೆAದು ನಾಮಕರಣ ಮಾಡಿ ಸಂಘದ ಏಳಿಗೆಗಾಗಿ ದುಡಿದ ಎಲ್ಲಾ ಅಧ್ಯಕ್ಷರ ಭಾವಚಿತ್ರಗಳನ್ನು ಅಲ್ಲಿ ಹಾಕಿ ಅವರಿಗೆಲ್ಲಾ ಕೃತಜ್ಞತೆಯನ್ನು ಸಲ್ಲಿಸಿದೆ. ಕೇಂದ್ರ ಸಚಿವರಾದ ಸೋಮಣ್ಣ ಮತ್ತು ಅವರ ಪತ್ನಿ ಶೈಲಜಾ ಸೋಮಣ್ಣನವರ ಬೆಂಬಲವನ್ನು ಸಂಘದವರು ಕೃತಜ್ಞತೆಯಿಂದ ನೆನೆಯುತ್ತಾರೆ.
ಯಾವ ಮಹಿಳಾ ಸಂಘದವರೂ ಮಾಡದಿರುವ ಬಹಳ ವಿಶೇಷವೆನಿಸುವ ಮಹಿಳಾ ವ್ಯಾಯಾಮ ಶಾಲೆಯನ್ನು (ಜಿಮ್)28-3-2009 ರಲ್ಲಿ ಇವರು ಪ್ರಾರಂಭಿಸಿದರು. ಮಾಜಿ ಕೇಂದ್ರ ಸಚಿವರಾದ ದಿವಂಗತ ಅನಂತ್ ಕುಮಾರ್ ಅವರ ಬೆಂಬಲದಿAದ ಇದು ಸಾಧ್ಯವಾಯಿತೆಂದು ಸಂಘ ಅವರನ್ನು ಸ್ಮರಿಸುತ್ತದೆ. ಕುಟುಂಬದಲ್ಲಿ ಮಹಿಳೆಯ ಆರೋಗ್ಯ ಎಷ್ಟು ಮುಖ್ಯ ಎಂದು ಸಂಘ ಜನಸಾಮಾನ್ಯರಿಗೆ ಒಳ್ಳೆಯ ಸಂದೇಶ ನೀಡಿದೆ.
ಮನೋರಂಜನೆ ಮಾತ್ರ ಮಹಿಳಾ ಸಂಘದ ಉದ್ದೇಶವಲ್ಲ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕೆಂದು ಸಂಘ 25-10-13 ರಲ್ಲಿ ಒಂದು ಟ್ರಸ್ಟನ್ನು ಸ್ಥಾಪಿಸಿತು.ಈ ಟ್ರಸ್ಟ್ ಮೂಲಕ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಸಂಘ ಕೈಗೊಂಡಿದೆ. ಪ್ರವಾಹ ಪೀಡಿತರಿಗೆ, ನಿರಾಶ್ರಿತರಿಗೆ, ಕೋವಿಡ್ ಸಂಕಷ್ಟಿತರಿಗೆ ಕುರುಡರಿಗೆ, ವಿಕಲಚೇತನರಿಗೆ, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಪ್ರತಿಭಾನ್ವಿತ ಬಡ ಮಕ್ಕಳಿಗೆ ನಾಕು ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡಿ ಈ ಟ್ರಸ್ಟ್ ಮೂಲಕ ಸಂಘ ತನ್ನ ಸಹಾಯ ಹಸ್ತವನ್ನು ಚಾಚಿದೆ.
ವಾತ್ಸಲ್ಯ ಮಹಿಳಾ ಸಂಘದ ಸಂಸ್ಥಾಪನಾ ದಿನದಿಂದ ಅದನ್ನು ಮುನ್ನಡೆಸಿರುವ ಸಂಸ್ಥಾಪನ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುನಂದಾ ಮೂರ್ತಿ ಹಾಗೂ ಸಮಾನ ಮನಸ್ಕ ಸದಸ್ಯರ ಮಾರ್ಗದರ್ಶನದಲ್ಲಿ ಮತ್ತು ಅನೇಕ ಉತ್ಸಾಹಿ ಮಹಿಳೆಯರ ಶ್ರದ್ಧೆ ಮತ್ತು ಶ್ರಮದಿಂದ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಉತ್ತಮ ಸಮಾಜ ಮುಖಿ ಕಾರ್ಯಗೈಯ್ಯುತ್ತಿರುವ ವಾತ್ಸಲ್ಯ ಮಹಿಳಾ ಸಂಘ ಹೀಗೆ ಯಶಸ್ವಿಯಾಗಿ ಮುನ್ನಡೆದು 50 ವರ್ಷಗಳನ್ನು ಪುರೈಸಿ ಸುವರ್ಣ ಮಹೋತ್ಸವ ಆಚರಿಸಲಿ ಎಂದು ಹಾರೈಸೋಣ.
-ನಾಗವೇಣಿ ರಂಗನ್
*****************
ವಾತ್ಸಲ್ಯ ಮಹಿಳಾ ಸಂಘದ ಸಾಧನೆಯ ಮಹತ್ವದ ಮೈಲಿಗಲ್ಲುಗಳು



