ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆಗಳು, ಕುಂದು-ಕೊರತೆಗಳನ್ನು ಆಲಿಸಲು 2ನೇ ಹಂತದಲ್ಲಿ ಹಮ್ಮಿಕೊಂಡಿರುವ `ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮವು ಜ. 11 ರಂದು ಬೆಳಗ್ಗೆ 9.30 ಕ್ಕೆ ಬೊಮ್ಮನಹಳ್ಳಿ ವಲಯದ ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ ನಡೆಯಲಿದೆ.
ನಗರದಲ್ಲಿ ಈಗಾಗಲೇ 3 ಕಡೆ `ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ನಡೆದಿದೆ.ಬೊಮ್ಮನಹಳ್ಳಿ ವಲಯ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ಹಾಗೂ ಆನೇಕಲ್ ವಿಧಾನಸಭೆ ಕ್ಷೇತ್ರದ ಕೂಡ್ಲು ವಾರ್ಡ್ ನ ನಾಗರಿಕರ ಅಹವಾಲು ಆಲಿಸುವ ಕಾರ್ಯಕ್ರಮ ಜರಗನಹಳ್ಳಿ ಸರ್ಕಾರಿ ಶಾಲೆ ಆಟದ ಮೈದಾನದಲ್ಲಿ (ಮೆಟ್ರೋ ಪಿಲ್ಲರ್ ಸಂಖ್ಯೆ: 89 ಸಮೀಪ) ನಡೆಯಲಿದೆ.
ಅದೇ ರೀತಿ ಜನವರಿ 16 ರಂದು ಬೆಳಗ್ಗೆ 9.30 ಕ್ಕೆ ಪಶ್ಚಿಮ ವಲಯ ವ್ಯಾಪ್ತಿಗೆ ಬರುವ ಗಾಂಧಿನಗರ, ಮಲ್ಲೇಶ್ವರಂ ಹಾಗೂ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರಗಳ ನಾಗರಿಕರ ಅಹವಾಲು ಆಲಿಸುವ ಕಾರ್ಯಕ್ರಮ ಶೇಷಾದ್ರಿಪುರದ ಶಿರೂರ್ ಆಟದ ಮೈದಾನದ ಗುಂಡುರಾವ್ ಮೆಮೋರಿಯಲ್ ಹಾಲ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ.ನಾಗರಿಕರಿಂದ ಅಭೂತಪೂರ್ವ ಸ್ಪಂದನೆ: ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ನಾಗರಿಕರ ತೊಂದರೆಗಳಿಗೆ ಪರಿಹಾರ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಬಿಬಿಎಂಪಿ, ಬಿಡಿಎ, ಬಿಎಂಆರ್ಡಿಎ, ಬಿಎಂಆರ್ಸಿಎಲ್, ಬೆಸ್ಕಾಂ, ಜಲಮಂಡಳಿ, ಪೊಲೀಸ್, ಕಂದಾಯ, ಗ್ಯಾರಂಟಿ ಯೋಜನೆಗಳ ಸಮಸ್ಯೆಗಳ ಬಗ್ಗೆ ಅಹವಾಲು ಆಲಿಲಾಗುವುದು.ಕಚೇರಿಗಳಿಗೆ ಅಲೆದು ಬೇಸತ್ತಿರುವಂತಹ ನಾಗರಿಕರು ತಮ್ಮ ಮನೆ ಬಾಗಿಲಲ್ಲೇ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈಗಾಗಲೇ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಪೂರ್ಣಗೊಂಡಿದೆ. ಬೆಂಗಳೂರಿನ ಉಳಿದ ಕ್ಷೇತ್ರಗಳಲ್ಲಿ ಹಂತಹಂತವಾಗಿ ನಡೆಸಲಾಗುವುದು. ನಾಗರಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಪ್ರಕಟಣೆ ಕೋರಿದೆ.