ಬೆಂಗಳೂರು: ಅಫ್ಘಾನಿಸ್ಥಾನದ ವಿರುದ್ಧದ ಟಿ20 ಸರಣಿಗೆ ಕೊನೆಗೂ ಅಳೆದು ತೂಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ ಅವರು ಮತ್ತೆ ಟಿ20 ತಂಡಕ್ಕೆ ಆಗಮಿಸಿದ್ದಾರೆ. ಕಳೆದ ಟಿ20 ವಿಶ್ವಕಪ್ ಬಳಿಕ ಒಂದೂ ಪಂದ್ಯವಾಡದ ರೋಹಿತ್ ಶರ್ಮಾ ಮತ್ತೆ ನಾಯಕನಾಗಿ ಮರಳಿದ್ದಾರೆ.
ಇದೇ ವೇಳೆ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿಲ್ಲ. ಟೆಸ್ಟ್ ಮತ್ತು ಏಕದಿನ ತಂಡದಲ್ಲಿ ವಿಕೆಟ್ ಕೀಪರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ರಾಹುಲ್ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡಲಾಗಿಲ್ಲ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮತ್ತು ಸೆಂಚೂರಿಯನ್ ನ ಟಫ್ ಪಿಚ್ ನಲ್ಲಿ ಶತಕ ಬಾರಿಸಿದ್ದ ರಾಹುಲ್ ಅವರು ಟಿ20 ಸರಣಿ ಆಡಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಆದರೆ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇದನ್ನು ಉಲ್ಟಾ ಮಾಡಿದೆ.