ರಾಮನಗರ: ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ನಾರಿಶಕ್ತಿ ಯೋಜನೆ ಆರ್ಥಿಕವಾಗಿ ಶಕ್ತಿ ತುಂಬುತ್ತಿದೆ ಎಂದು ಎಂಇಐ ಮಾಜಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ.ಶೇಷಾದ್ರಿ (ಶಶಿ) ತಿಳಿಸಿದರು.ನಗರದ 25ನೇ ವಾರ್ಡಿನ ಮಂಜುನಾಥನಗರದಲ್ಲಿ ಬುಧವಾರ ನಡೆದ ಮಹಿಳೆಯರ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದ ಸಮಯದಲ್ಲಿ ಬಡವರು, ಶೋಷಿತರು, ಮಧ್ಯಮ ವರ್ಗದ ಜನರಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ.
ಅದರಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸಹಿ ಮಾಡಿ ಕೊಟ್ಟ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿದೆ. ಜೊತೆಗೆ ರಾಜ್ಯದ ಜನ ಜನರ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ಕಾರ್ಯಕ್ರಮಗಳಾಗಿವೆ. ಅಷ್ಟೆ ಅಲ್ಲದೆ ಗ್ಯಾರಂಟಿ ಯೋಜನೆಗಳು ರಾಷ್ಟ್ರ ಮಟ್ಟದಲ್ಲಿಯೂ ಜನಪ್ರಿಯತೆ ಪಡೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐದು ಗ್ಯಾರಂಟಿ ಯೋಜನೆಗಳ ಪೈಕಿ ವಿಶೇಷವಾಗಿ ಸಮಾಜದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ ನೇರವಾಗಿ 2 ಸಾವಿರ ಹಣ ನೀಡಿದ ಕಾರ್ಯಕ್ರಮದಿಂದ ಇಂದು ಮಹಿಳೆಯರು ಕುಟುಂಬದ ನಿರ್ವಹಣೆಯನ್ನು ಸ್ವತಂತ್ರವಾಗಿ ನಿರ್ವಹಿಸು ವಷ್ಟರ ಮಟ್ಟಿಗೆ ಯೋಜನೆ ಸಾಕಾರವಾಗಿದೆ. ಅಲ್ಲದೆ ನೆರವು ನೀಡಿದ ಕಾಂಗ್ರೆಸ್ ಪಕ್ಷದ ಪರವಾಗಿ ಮಹಿಳೆಯರು ನಿಂತಿದ್ದಾರೆ ಎಂಬು ದಕ್ಕೆ ಸಭೆಯಲ್ಲಿ ಉತ್ಸುಕತೆಯಿಂದ ಸೇರಿರುವ ಮಹಿಳೆಯರೇ ಸಾಕ್ಷಿ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಮಂಜುನಾಥನಗರ ವಾರ್ಡ್ನಂತಹ ದೊಡ್ಡ ಬಡಾವಣೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಈ ವಾರ್ಡಿನಲ್ಲೂ ಬಡವರ ಸಂಖ್ಯೆ ಹೆಚ್ಚು ಇದ್ದು, ಅಂತವರನ್ನು ಗುರ್ತಿಸಿ ಶಾಸಕರ ನೇತೃತ್ವದಲ್ಲಿ ನಿವೇಶನ ನೀಡುವ ಕೆಲಸ ಮಾಡಲಾಗುವುದು. ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದ ಅವರು ಇನ್ನಷ್ಟು ಪಟ್ಟಣದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹಾಗೂ ಅಭಿವೃದ್ದಿ ಕೆಲಸಗಳು ಸಾಕಾರವಾಗಬೇಕಿದ್ದು,
ಅರ್ಕಾವತಿ ನದಿ ದಂಡೆಯಲ್ಲಿ ಉದ್ಯಾನವನ, ಪಾಥ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳ ನಿರೀಕ್ಷೆಯಲ್ಲ್ಲಿದ್ದೇವೆ. ಅದಕ್ಕಾಗಿ ಡಿ.ಕೆ.ಸುರೇಶ್ ಅವರ ಹಸ್ತದ ಗುರುತಿಗೆ ಹೆಚ್ಚು ಮತ ಕೊಟ್ಟು ಆಯ್ಕೆ ಮಾಡಿ ಎಂದು ಮಹಿಳೆಯರಲ್ಲಿ ಮನವಿ ಮಾಡಿದರು.ಈ ವೇಳೆ ನಗರಸಭಾ ಸದಸ್ಯ ಮುತ್ತುರಾಜು, ಕಾಂಗ್ರೆಸ್ ಮುಖಂಡ ಉಮೇಶ, ನವೀನ್ನಾಗಣ್ಣ, ಶಿವಣ್ಣ, ರಮೇಶ, ಬೈರಪ್ಪ, ರಾಧ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.