ಬೆಂಗಳೂರು: ಭವ್ಯ ಭಾರತ ನಿರ್ಮಾಣ ಕಾರ್ಯದಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಲಿದ್ದು, ಈ ನಿಟ್ಟಿನಲ್ಲಿ ಯುವ ಸಮುದಾಯ ಕೈಜೋಡಿಸಬೇಕು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಶ್ರೀಮತಿ ಬಿ.ನೀಲಮ್ಮ ತಿಳಿಸಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ದತ್ತಶ್ರೀ ಸಾಂಸ್ಕೃತಿಕ ವೇದಿಕೆ ಹಾಗೂ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಶ್ರೀಮತಿ ಬಿ.ನೀಲಮ್ಮ ಮಾತನಾಡಿದರು.
ಭಾಷೆ, ನೆಲ, ಸಂಸ್ಕೃತಿ ವಿಷಯದಲ್ಲಿ ಭಾರತೀಯರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಶಕ್ತಿಯಿದೆ. ಸಂವಿಧಾನಕ್ಕೆ ಗೌರವ ಸಲ್ಲಿಸುವ ಜತೆಗೆ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನತೆ ಮುಂದಡಿ ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ || ಆರ್.ವಿ. ಮಂಜುನಾಥ್ ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ಸಾಹಿತಿಗಳು ಸಂಸ್ಕೃತಿಯ ಚಿಂತಕರಾದ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಗೋವಿಂದರಾಜನಗರ ವಿ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ, ಡಾ. ರ. ನರಸಿಂಹಮೂರ್ತಿ, ದತ್ತಶ್ರೀ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಭಾಸ್ಕರ್, ಶೇಷಾದ್ರಿಪುರಂ ಕಾಲೇಜಿನ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ದೇಶಭಕ್ತಿ ಗೀತೆಗಳ ಗಾಯನವನ್ನು ನಾಡಿನ ಹೆಸರಾಂತ ಗಾಯಕ ಸಂತವಾಣಿ ಸುಧಾಕರ್ ಮತ್ತು ತಂಡದವರು ಪ್ರಸ್ತುತ ಪಡಿಸಿದರು. ಗಾಯನದಲ್ಲಿ ಗಾಯಕರಾದ ಸಂತವಾಣಿ ಸುಧಾಕರ್, ಜಯರಾಮ್, ಗಾಯಕಿ ದೇವಿಕಾ ನಂಬೋದರಿ ಮತ್ತಿತರರು ತಮ್ಮ ಶುಶ್ರಾವ್ಯ ಕಂಠದಿಂದ ಹಾಡಿ ನೆರೆದಿದ್ದ ನೂರಾರು ವಿದ್ಯಾರ್ಥಿಗಳನ್ನು ರಂಜಿಸಿದರು. ವಾದ್ಯದಲ್ಲಿ ಕೀಬೋರ್ಡ್ ನಲ್ಲಿ ಕಿರಣ್, ತಬಲದಲ್ಲಿ ರಘುರಾಮಕೃಷ್ಣ, ರಿದಂ ಪ್ಯಾಡ್ ನಲ್ಲಿ ನಾಗರಾಜು ಸಹಕಾರ ನೀಡಿದರು.