ರಾಮನಗರ: ಜೆಡಿಎಸ್-ಬಿಜೆಪಿ ಪಕ್ಷಗಳ ಮತಗಳ ಪ್ರಮಾಣ, ಮೋದಿಯವರ ಬಗ್ಗೆ ಜನರಲ್ಲಿರುವ ವಿಶ್ವಾಸ, ಡಾ.ಮಂಜುನಾಥ್ ಬಗ್ಗೆ ಗೌರವವಿರುವುದೇ ನಮ್ಮ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ಗೆ ಪ್ಲಸ್ ಪಾಯಿಂಟ್ ಎಂದು ಮಾಜಿ ಸಚಿವ ಹಾಗೂ ಶಾಸಕ ಸುರೇಶ್ಕುಮಾರ್ ಹೇಳಿದರು.
ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ಮತಯಾಚನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾಗಡಿ, ಕುಣಿಗಲ್ ಕ್ಷೇತ್ರಗಳಲ್ಲಿ ಈಗಾಗಲೇ ವಕೀಲರೊಂದಿಗೆ ಸಂವಾದ ನಡೆಸಿ ಡಾ.ಸಿ.ಎನ್.ಮಂಜುನಾಥ್ ಪರ ಮತಯಾಚನೆ ಮಾಡಿದ್ದೇನೆ.
ಜನರಲ್ಲಿ ರಾಜಕಾರಣದ ಮೇಲೆ ನಂಬಿಕೆ ಬರಬೇಕೆಂದರೆ, ಅವರು ರಾಜಕೀಯವಾಗಿ ಯಶಸ್ಸು ಕಾಣಬೇಕು. ಅವರ ವ್ಯಕ್ತಿತ್ವ ಮತ್ತು ಕೊಡುಗೆ ಬಗ್ಗೆ ನಾನು ಏನು ಜನತೆಗೆ ಹೇಳಬೇಕಿಲ್ಲ. ಕ್ಷೇತ್ರದೆಲ್ಲೆಡೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ನೋಡಿದರೆ ಮೈತ್ರಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿ ದೇಶಕ್ಕೆ ಒಂದು ಸಂದೇಶ ನೀಡುವಂತಹ ಫಲಿತಾಂಶ ಹೊರ ಬರಲಿದೆ ಎಂದರು.
ಮೈಸೂರಿನಲ್ಲಿ ಯದುವೀರು ಪರ, ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಮತ ಯಾಚನೆ ಮಾಡಿ ಇಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಪರ ಮತ ಯಾಚಿಸಿದ್ದೇನೆ. ಎನ್ಡಿಎ ಅಭ್ಯರ್ಥಿಗಳಿಗೆ ಜನರು ಒಲವು ತೋರುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಹಿಂದೆ ನಡೆದ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ, ಸೋತ ಅಭ್ಯರ್ಥಿಗಳಿಗೆ ಮತಗಳ ವ್ಯತ್ಯಾಸವಿದೆ. ಡಾ.ಮಂಜುನಾಥ್ ರಾಜಕೀಯಕ್ಕೆ ಹೊಸಗಾಗಿದ್ದರು, ಅವರ ಹೆಸರು ರಾಜಕೀಯಕ್ಕೆ ಹೊಸದಲ್ಲ.
ಅತಃಕರಣದಿಂದ ಕೂಡಿದ ವೈದ್ಯರಾಗಿ ಗುರ್ತಿಸಿಕೊಂಡಿದ್ದಾರೆ ಎಂದು ಹೇಳಿದರು.ವಾಸ್ತವ ಸಂಗತಿಗಳ ಆಧಾರದ ಮೇಲೆ ಮತ ಕೇಳಲು ಆಗದವರು, ರಾಜಕೀಯವಾಗಿ ಅಭದ್ರತೆ ಕಾಡುವವರು ಮತದಾರರಿಗೆ ಆಮಿಷಗಳನ್ನು ಹೊಡ್ಡುತ್ತಾರೆ. ಜನರು ಬುದ್ದವಂತರಾಗಿದ್ದು, ಆಮಿಷಗಳಿಗೆ ಬಲಿಯಾಗದೆ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ಹಿರಿಯ ವಕೀಲರಾದ ಎ.ಪಿ.ರಂಗನಾಥ್, ಸುಬ್ಬಾಶಾಸ್ತ್ರಿ, ವಕೀಲರ ಸಂಘದ ಅಧ್ಯಕ್ಷ ಶ್ರೀವತ್ಸ, ಕಾರ್ಯದರ್ಶಿ ತಿಮ್ಮೇಗೌಡ, ನಗರ ಮಂಡಲ ಬಿಜೆಪಿ ಅಧ್ಯಕ್ಷ ದರ್ಶನ್, ನಗರಸಭೆ ಮಾಜಿ ಸದಸ್ಯ ನಾಗೇಶ್, ವಕೀಲರಾದ ರೇಣುಕಾಪ್ರಸಾದ್, ಕೆ.ಎಂ.ವಿಜಯ್ಕುಮಾರ್ ಬಿಜೆಪಿ ಮುಖಂಡ ಗಿರಿಗೌಡ, ಕಾಳಯ್ಯ, ಮಂಜು ಮತ್ತಿತರರು ಇದ್ದರು.