ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ದಕ್ಷಿಣ ವಲಯದ ವತಿಯಿಂದ ಬೆಂಗಳೂರಿನ ಗಿರಿನಗರದ ಅಕ್ಷರಮ್ನಲ್ಲಿ `ಕುಮಾರವ್ಯಾಸನ ರಸಸೃಷ್ಟಿ’ ಎಂಬ ವಿನೂತನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಖ್ಯಾತ ಉದ್ಯಮಿಗಳು, ರಾಷ್ಟ್ರೀಯ ವಿಚಾರಗಳ ಚಿಂತಕರೂ ಆದ ಶ್ರೀ ವಾದಿರಾಜ ಆಯಾಚಿತ ಅವರು ವಹಿಸಿದ್ದರು.
ವೇದಿಕೆಯಲ್ಲಿ ಕುಮಾರವ್ಯಾಸ ಭಾರತದ ವಾಚನಕ್ಕಾಗಿ ವಿದ್ಯಾನ್ ಕರ್ನಾಟಕ ಕಲಾಶ್ರೀ ಶ್ರೀ ಎಂ.ಆರ್. ಕೇಶವಮೂರ್ತಿಯವರು ಮತ್ತು ವ್ಯಾಖ್ಯಾನಕ್ಕಾಗಿ ಶಾಂತಾರಾಮ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ವಿದುಷಿ ಶ್ರೀಮತಿ ಶಾಂತಾ ಗೋಪಾಲ್ರವರಿದ್ದು ವೇದಿಕೆ ವಿದ್ವತ್ಪೂರ್ಣವಾಗಿತ್ತು.ಕುಮಾರಿ ಕೃತಿ ಪ್ರಭಂಜನ್ರವರ ಸೊಗಸಾದ ಶ್ರೀರಾಮನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿಯ ರಸವತ್ತಾದ ಆಯ್ದ ಪದ್ಯಗಳ ವಾಚನ ಮತ್ತು ವ್ಯಾಖ್ಯಾನ ನಡೆಯಿತು.
ಮೊದಲಿಗೆ ವಿದುಷಿ ಶಾಂತಾ ಗೋಪಾಲ್ವರು ಕುಮಾರವ್ಯಾಸನ ಕಾಲಘಟ್ಟ, ಅವನ ಕೌಟುಂಬಿಕ ಹಿನ್ನಲೆಯನ್ನು ಪರಿಚಯ ಮಾಡಿಕೊಟ್ಟರು. ರೂಪಕ ಸಾಮ್ರಾಜ್ಯ ಚಕ್ರವರ್ತಿ ಬಿರುದಾಂಕಿತ ಗದುಗಿನ ನಾರಾಯಣಪ್ಪನು ವ್ಯಾಸರಿಂದ ಪ್ರಭಾವಿತನಾಗಿ ಕುಮಾರವ್ಯಾಸನಾದದ್ದು, ವ್ಯಾಸಸೃಷ್ಟಿಯನ್ನು ಮತ್ತಷ್ಟು ರಸಭರಿತಗೊಳಿಸಿದ್ದನ್ನು ಸಭೆಯ ಮುಂದೆ ತೆರೆದಿಟ್ಟರು. ಸಾವಿರ ಪದಗಳಲ್ಲಿ ಹೇಳಲಾಗದ್ದು ಒಂದು ಉಪಮೆಯಲ್ಲಿ ಕುಮಾರವ್ಯಾಸ ಹೇಗೆ ಹೇಳುತ್ತಾನೆ; ನುಡಿಗಟ್ಟು, ಅತಿಶಯೋಕ್ತಿ, ವಿನೋದವನ್ನು ರಸವತ್ತಾಗಿ ಹೇಗೆ ನಿರ್ವಾಹ ಮಾಡಿದ್ದಾನೆ ಅನ್ನುವುದರ ಪರಿಚಯವನ್ನು ಮಾಡಿಕೊಟ್ಟರು.
ನಂತರದಲ್ಲಿ ನೇರವಾಗಿ ವಿಷಯದ ಪ್ರವೇಶಕ್ಕಿಳಿದು, ದ್ರೌಪದೀ ಸ್ವಯಂವರದ ಆಯ್ದ ಪದ್ಯಗಳನ್ನು ವಿದ್ಯಾನ್ ಎಮ್.ಆರ್. ಕೇಶವಮೂರ್ತಿಯವರು ಸೊಗಸಾಗಿ ವಾಚನ ಮಾಡಿದರು. ಡಂಗುರಸಾರುವ ಪದ್ಯದಲ್ಲಿರುವ ಹಾಸ್ಯಪ್ರಯೋಗ, ಶಬ್ದಗಳ ರಸವತ್ತಾದ ಬಳಕೆಯ ಬಗ್ಗೆ ವ್ಯಾಖ್ಯಾನಕಾರರು ಬೆಳಕು ಚೆಲ್ಲಿದರು. ದ್ರೌಪದಿಯ ಸೌಂದರ್ಯ, ಅಲಂಕಾರದ ವರ್ಣನೆಯಲ್ಲಿನ ಪದಪ್ರಯೋಗದ ಸೊಗಸನ್ನು ತೋರಿಸಿಕೊಟ್ಟರು. ಅಂದಿನ ಕಾಲಘಟ್ಟದ ಬಳಕೆಯಲ್ಲಿದ್ದ ಸೌಂದರ್ಯವರ್ಧಕಗಳ ಸಣ್ಣ ಪರಿಚಯವನ್ನೂ ಕುಮಾರವ್ಯಾಸನ ಮೂಲಕ ಮಾಡಿಕೊಟ್ಟರು.
ಸಭಾಪರ್ವದ ಪದ್ಯಗಳಲ್ಲಿನ ರೋಷ, ಭಾವ, ನೋವು ವಾಚನದಲ್ಲಿ ಎದ್ದು ಕಾಣುತ್ತಿತ್ತು. ವ್ಯಾಖ್ಯಾನಕಾರರೂ ಆ ಪದ್ಯಗಳಲ್ಲಿನ ಭಾವ, ದುಃಖವನ್ನು ರೂಪಕಗಳನ್ನು ಬಳಸಿ ಮನೋಜ್ಞವಾಗಿ ಚಿತ್ರಿಸಿದ್ದನ್ನು ವಿವರಿಸಿದರು. ವಿದುರ ಎಲ್ಲವನ್ನೂ ಕಣ್ಣಾರೆ ಕಂಡು ಅಂತರಾಳದಿಂದ ದುಃಖಿಸುವುದನ್ನು, ದುರ್ಯೋಧನನಿಗೆ ಶಪಿಸುವ ಪದ್ಯಗಳ ಶಬ್ದಪ್ರಯೋಗ, ಉಪಮೆಯ ಸೊಗಸನ್ನು ತಿಳಿಸಿಕೊಟ್ಟರು.
ದೂರ್ವಾಸ ಪ್ರಸಂಗದಲ್ಲಿನ ಪಾಂಡವರ ಕಷ್ಟ, ಕಷ್ಟದ ಮಧ್ಯದಲ್ಲೂ ಉದಯಿಸಿದ ಹಾಸ್ಯ ಗಮನಸೆಳೆಯಿತು. ಕಷ್ಟಪರಿಹಾರಕ್ಕಾಗಿ ದ್ರೌಪದಿಯು ಮಾಡಿದ ಶ್ರೀಕೃಷ್ಣನ ಕುರಿತಾದ ಪ್ರಾರ್ಥನೆಯ ಪದ್ಯವನ್ನು ಅಷ್ಟೇ ಭಕ್ತಿಪೂರ್ಣವಾಗಿ ವಾಚನ ಮಾಡಿದರು. ಕೊನೆಯಲ್ಲಿ ಮಾಡಿದ ಫಲಶೃತಿ ವಾಚನ ಕಾರ್ಯಕ್ರಮಕ್ಕೆ ದೈವಿಕ ಮೆರುಗನ್ನು ನೀಡಿತು.
ಸಾಹಿತಿ ತಿಮ್ಮಣ್ಣಭಟ್ಟರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಕಾರ್ಯಚಟುವಟಿಕೆಯ ಸರಳ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವಾದಿರಾಜ ಆಯಾಚಿತರವರು ಮಾತನಾಡಿ, ಹಲವು ಶತಮಾನಗಳ ಹಿಂದೆ ರಚಿತವಾದ ಕುಮಾರವ್ಯಾಸ ಭಾರತವನ್ನು ನಾವು ಇಂದಿಗೂ ಓದುತ್ತಿರುವುದು, ಅದರ ಕುರಿತಾದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದೇ ಅದು ಎಷ್ಟು ಘನವಾದ ಸಾಹಿತ್ಯ ಅನ್ನುವುದಕ್ಕೆ ಸಾಕ್ಷಿ ಅಂದರು.
ಕಾರ್ಯಕ್ರಮದ ನಿರೂಪಣೆಯನ್ನು ಅಭಿತೇಜ್ ಪಂಡಿತ್ರವರು ನಿರ್ವಹಿಸಿದರೆ, ಬಂದ ಅತಿಥಿಗಳನ್ನು ಚಿದಾನಂದ ಶಾಬಾದಿಯವರು ಸ್ವಾಗತಿಸಿದರು. ಕೊನೆಯಲ್ಲಿ ರವಿ ಹೆಗಡೆಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.