ಬೆಂಗಳೂರು: ವೈಜ್ಞಾನಿಕವಾಗಿ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಶೇ. 33ರಷ್ಟು ಹಸಿರು ಹೊದಿಕೆ ಇದ್ದಾಗ ಮಾತ್ರ ಆರೋಗ್ಯಕರ ನಗರವನ್ನು ಕಟ್ಟಲು ಸಾಧ್ಯ, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕ್ಷೀಣಿಸುತ್ತಿದ್ದು, 1.40 ಕೋಟಿ ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಕನಿಷ್ಠ 10 ಕೋಟಿ ಮರಗಳನ್ನು ಪೋಷಿಸುವ ಅಗತ್ಯವಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಈಶ್ವರ ಬಿ ಖಂಡ್ರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಅಸರ್ ಸೋಷಿಯಲ್ ಇಂಪ್ಯಾಕ್ಟ್ ಅಡ್ವೆಸರ್ ಸಂಸ್ಥೆಯ ಸಹಯೋಗದಲ್ಲಿ ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಬೆಂಗಳೂರಿನಲ್ಲಿ ತಾಪಮಾನ ವೈಪರೀತ್ಯ ಹಾಗೂ ಅದರ ಪರಿಣಾಮಗಳ ಕುರಿತು ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಬ್ಬ ಮನಷ್ಯನಿಗೆ ಉತ್ತಮ ಆಮ್ಲಜನಕ ದೊರಕಲು ಕನಿಷ್ಠ 7 ಮರಗಳು ಇರಬೇಕು ಎಂದು ವಿಜ್ಞಾನ ಪ್ರತಿಪಾದಿಸುತ್ತದೆ ಎಂದರು.ಬೆಂಗಳೂರಿನ ಪರಿಸರದಲ್ಲಾಗುತ್ತಿರುವ ಬದಲಾವಣೆ ಹಾಗೂ ಅರಣ್ಯ ಇಲಾಖೆಯ ಮುಂದಿನ ಯೋಜನೆಗಳ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು ಒಂದು ಕಾಲದಲ್ಲಿ ‘ನಿವೃತ್ತರ ಸ್ವರ್ಗ’ ಹಾಗೂ ‘ಹವಾನಿಯಂತ್ರಿತ ನಗರ’ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು ಇಂದು ಕಾಂಕ್ರಿಟ್ ಜಂಗಲ್ ಆಗಿ ಮಾರ್ಪಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಬೆಂಗಳೂರು ಇದೇ ರೀತಿಯ ಬೆಳವಣಿಗೆ ಹಾಗೂ ವಾಹನ ದಟ್ಟಣೆ ಹೆಚ್ಚಿಸಿಕೊಂಡಲ್ಲಿ ನವದೆಹಲಿಯಂತೆ ‘ಗ್ಯಾಸ್ ಚೇಂಬರ್’ ಆಗುವುದನ್ನು ತಪ್ಪಿಸಲು ಹಸಿರು ಹೊದಿಕೆಯನ್ನು ಹೆಚ್ಚಿಸುವ ತತ್ ಕ್ಷಣದ ಅಗತ್ಯವಿದೆ ಎಂದು ಹೇಳಿದರು.
ಗತವೈಭವದ ಮರುಸ್ಥಾಪನೆ: ಕೆಂಪೇಗೌಡರು ನಿರ್ಮಿಸಿದ ಹಸಿರು ಬೆಂಗಳೂರನ್ನು ಮರಳಿ ಪಡೆಯಲು ಅರಣ್ಯ ಇಲಾಖೆ ಬದ್ಧವಾಗಿದೆ. ನಗರದ ಸುತ್ತಮುತ್ತಲ ಹಸಿರು ಹೊದಿಕೆಯನ್ನು ಮರುಸ್ಥಾಪಿಸಲು ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮಾಲಿನ್ಯ ಮತ್ತು ಕೆರೆಗಳ ಅವನತಿ: ಬೆಂಗಳೂರಿನಲ್ಲಿದ್ದ ಸುಮಾರು 250 ಕೆರೆಗಳಲ್ಲಿ ಹಲವು ಅಭಿವೃದ್ಧಿಯಲ್ಲಿ ಮಾಯವಾಗಿದ್ದು, ಇನ್ನೂ ಕೆಲವು ಇಂದು ತ್ಯಾಜ್ಯ ನೀರು ಸೇರಿ ಕಲುಷಿತಗೊಂಡಿವೆ. ಇದರಿಂದ ಜಲ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಂಚಾರ ದಟ್ಟಣೆ ಮತ್ತು ವಾಹನಗಳ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯಿಂದ ತಾಪಮಾನ ಏರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮರುವಶವಾದ ಭೂಮಿಯಲ್ಲಿ ‘ನೆಡುತೋಪು’ಗಳ ನಿರ್ಮಾಣ: ಕೇವಲ ಒತ್ತುವರಿ ತೆರವು ಮಾಡುವುದಷ್ಟೇ ಅಲ್ಲದೆ, ಭೂಗಳ್ಳರು ಮತ್ತೆ ಅತಿಕ್ರಮಣ ಮಾಡದಂತೆ ತಡೆಯಲು ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ. ಮರುವಶಪಡಿಸಿಕೊಂಡ ಜಾಗಕ್ಕೆ ತಕ್ಷಣವೇ ಕಾಂಪೌಂಡ್ ನಿರ್ಮಿಸಿ, ಸಾವಿರಾರು ಸಸಿಗಳನ್ನು ನೆಡುವ ಮೂಲಕ ಆ ಪ್ರದೇಶಗಳನ್ನು ‘ನೆಡುತೋಪು’ ಗಳನ್ನಾಗಿ ಪರಿವರ್ತಿಸಲಾಗುವುದು. ಇದು ನಗರದ ಜನತೆಗೆ ಶುದ್ಧ ಗಾಳಿ ನೀಡುವ ನೈಸರ್ಗಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.ಬೆಂಗಳೂರಿಗೆ ಸಿಗಲಿದೆ ಮತ್ತೊಂದು ‘ಲಾಲ್ ಬಾಗ್’: ನಗರದ ಹಸಿರು ವಿಸ್ತೀರ್ಣ ಹೆಚ್ಚಿಸುವ ಸಲುವಾಗಿ ಬೆಂಗಳೂರು ಉತ್ತರ ತಾಲೂಕಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ‘ವಿಶ್ವಗುರು ಬಸವಣ್ಣನವರ ಬೃಹತ್ ಜೈವಿಕ ಉದ್ಯಾನವನ’ ತಲೆ ಎತ್ತಲಿದೆ ಎಂದು ಹೇಳಿದರು.ಹವಾಮಾನ ಬದಲಾವಣೆ ತಡೆಗೆ ಜಿಲ್ಲಾ ಮಟ್ಟದ ಕ್ರಿಯಾ ಯೋಜನೆ; ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಇಒPಖI ಸಂಸ್ಥೆ ರೂಪಿಸಿರುವ ‘ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ’ಗೆ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಎದುರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತರಬೇತಿ ಮತ್ತು ಅನುಷ್ಠಾನ ಪ್ರಕ್ರಿಯೆಗಳು ಶೀಘ್ರವೇ ಆರಂಭವಾಗಲಿವೆ.“ವೃಕ್ಷೋ ರಕ್ಷಿತಃ ರಕ್ಷಿತಃ” ಎಂಬ ಧ್ಯೇಯದೊಂದಿಗೆ ಬೆಂಗಳೂರಿನ ಕೆರೆಗಳ ಪುನರ್ನಿರ್ಮಾಣ ಮತ್ತು ನಗರದ ಹಸಿರು ವಲಯವನ್ನು ವಿಸ್ತರಿಸುವುದೇ ನಮ್ಮ ಅಂತಿಮ ಗುರಿಯಾಗಿದೆ ಎಂದು ತಿಳಿಸಿದರು.ಇಂದಿನ ಕಾರ್ಯಾಗಾರದಲ್ಲಿ ವಿಷಯ ತಜ್ಞರು ಮಂಡಿಸುವ ವಿಷಯ ಹಾಗೂ ಮಾಧ್ಯಮ ಪ್ರತಿನಿಧಿಗಳು ಚರ್ಚಿಸುವ ವಿಷಯದ ಕುರಿತು ವಿಸ್ತೃತ ವರದಿ ಸಲ್ಲಿಸಿದಲ್ಲಿ ಅರಣ್ಯ ಇಲಾಖೆ ವತಿಯಿಂದ ಕ್ರಮವಹಿಸಲಾಗುವುದು ಎಂದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಬದಲಾಗುತ್ತಿರುವ ಬೆಂಗಳೂರು ನಗರದಲ್ಲಾಗುತ್ತಿರುವ ಪರಿಸರ ಬದಲಾವಣೆ ಹಾಗೂ ಹೆಚ್ಚುತ್ತಿರುವ ಶಾಖದ ಕುರಿತು ವರದಿ ಮಾಡಿ ಸರ್ಕಾರದ ಗಮನ ಸೆಳೆಯುವ ಕರ್ತವ್ಯ ನಿರ್ವಹಿಸುವ ಮಾಧ್ಯಮಗಳು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಬ್ಧಾರಿಯಿಂದ ಇಂತಹ ವಿನೂತನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪ್ರಸ್ತುತ ದಶಕದಲ್ಲಿ ತಾಪಮಾನ ಏರಿಕೆ ವಿಷಯ ಜಾಗತಿಕವಾಗಿ ಆಳುವ ಸರ್ಕಾರ ಗಳ ಗಮನ ಸೆಳೆಯುತ್ತಿದೆ ಹಾಗೂ ಜನ-ಸಾಮಾನ್ಯರ ಸಾವು-ನೋವುಗಳಿಗೆ ಕಾರಣ ವಾಗುತ್ತಿದೆ. ಇಂತಹ ಗಂಭೀರ ವಿಷಯವನ್ನು ಕುರಿತು ಸರ್ಕಾರದ ಗಮನ ಸೆಳೆಯುವುದರ ಜೊತೆಗೆ ಜನ-ಸಾಮಾನ್ಯರು ಪಾಲಿಸಬೇಕಾದ ಜಾಗೃತಿ ಅಂಶಗಳ ಕುರಿತು ಇಂದಿನ ಈ ಕಾರ್ಯಗಾರ ಬೆಳಕು ಚೆಲ್ಲಿಲಿದೆ.ಮಾಧ್ಯಮ ಅಕಾಡೆಮಿಯ ಕಾರ್ಯಾ ಗಾರದಲ್ಲಿ ಚರ್ಚಿಸುವ ಹಾಗೂ ಮಂಡಿಸಿದ ವಿಷಯಗಳ ಕುರಿತು ಸರ್ಕಾರದ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಲಾಗುವುದು ಎಂದರು.ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಎಂ.ಎಸ್. ದಿವಾಕರ್ ಅವರು ಮಾತನಾಡಿ ಪರಿಸರ ವೈಪರೀತ್ಯಗಳು ಸಾಮಾನ್ಯವಾಗಿ ಸಂಭವಿಸುತ್ತಲೇ ಇರುತ್ತವೆ. ಪ್ರಸ್ತುತ ತಂತ್ರಜ್ಞಾನ ಹಾಗೂ ಮಾಧ್ಯಮ ಸಂವಹನದ ಪರಿಣಾಮ ಹೆಚ್ಚು ಸುದ್ದಿಯಾಗುತ್ತಿದೆ. ಇತಿಹಾಸ ತೆಗೆದು ನೋಡಿದಾಗ ಹಲವಾರು ದಾಖಲೆಗಳನ್ನು ಗಮನಿಸಬಹುದಾಗಿದೆ ಎಂದರು.ಅಧ್ಯಯನಗಳ ಪ್ರಕಾರ ಈ ವರ್ಷ ಮಳೆ ಕಡಿಮೆಯಾಗುವುದು ಎಂದು ವರದಿ ಹೇಳುತ್ತದೆ, ಬಿಸಿಲಿನ ತಾಪಮಾನ ಹೆಚ್ಚಾಗಿರುವುದು ತಿಳಿದು ಬಂದಿರುವ ವಿಷಯವಾಗಿರುವುದರಿಂದ ಈಗಾಗಲೇ ಬೆಂಗಳೂರಿನ ಐಐಎಸ್ಸಿ ಸಹಭಾಗಿತ್ವದಲ್ಲಿ ಈ ಬಿಸಿಲು ಸಂದರ್ಭದಲ್ಲಿ ಜನ-ಸಾಮಾನ್ಯರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ತಯಾರಿಸಿ ಜನ ಜಾಗೃತಿ ಮೂಡಿಸಲಾಗುತ್ತಿದೆ.1980 ರಲ್ಲಿಯೇ ಕರ್ನಾಟಕ ಪರಿಸರ ಬದಲಾವಣೆಗಳ ಕುರಿತು ಅಧ್ಯಯನಕ್ಕಾಗಿ ಡಿ ಎಮ್ ಸಿ ಸ್ಥಾಪಿಸುವ ಮೂಲಕ ಭಾರತದಲ್ಲಿಯೇ ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಹೋಬಳಿಗೊಂದರAತೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ವ್ಯವಸ್ಥೆ ಭಾರತದ ಯಾವುದೇ ರಾಜ್ಯಗಳಲ್ಲಿ ಇಲ್ಲ.ಬಿಸಿಲಿನ ಕುರಿತು ವರದಿ ಮಾಡುವ ಪತ್ರಕರ್ತರಿಗೆ ಬಿಸಲು ಪೂರ್ಣ ದಿನ ಒಂದೇ ರೀತಿ ಇರುವುದಿಲ್ಲ, ಯಾವುದೋ ಒಂದು ಸಮಯದಲ್ಲಿ ತನ್ನ ಗರಿಷ್ಠ ತಾಪಮಾನ ದಾಖಲಿಸಿ ಕಡಿಮೆಯಾಗುತ್ತದೆ. ಅದೇ ರೀತಿ ಆ ಬಿಸಿಲಿನ ತಾಪಮಾನಕ್ಕೆ ಬಿಸಿಯಾಗುವ ಪರಿಸರ ನಂತರ ಸಂಜೆಯಾದAತೆ ತಣ್ಣಗಾಗುವಲ್ಲಿ ತೆಗೆದುಕೊಳ್ಳುವ ಸಮಯ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸ ಹೊಂದಿರುತ್ತದೆ. ಕೆಲವು ಕಡೆ ಹೆಚ್ಚು ಸಮಯ ತೆಗೆದುಕೊಂಡರೆ ಮತ್ತೊಂದು ಕಡೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಅದರ ಆಧಾರದ ಮೇಲೆ ಒಟ್ಟಾರೆ ತಾಪಮಾನವನ್ನು ಅಳೆಯಬೇಕಾಗುತ್ತದೆ ಎಂದು ತಿಳಿಸಿದರು.ಉದ್ಘಾಟನಾ ಸಮಾರಂಭದ ನಂತರ ಆರಂಭವಾದ ಕಾರ್ಯಾಗಾರದಲ್ಲಿ ಅಸರ್ ಸೋಶಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಸಂಸ್ಥೆಯ ಮುಖ್ಯ ಸಂವಹನಾಧಿಕಾರಿ ಬ್ರಿಕೇಶ್ ಸಿಂಗ್ ಅವರು ಭಾಗವಹಿಸಿ, ‘ಕಾರ್ಯಾಗಾರದ ಉದ್ದೇಶ ಮತ್ತು ಪ್ರಸ್ತುತತೆ’ ವಿಷಯದ ಕುರಿತು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಾಗಾರವು ಪ್ರಸ್ತುತ ಸಾಮಾಜಿಕ ಸನ್ನಿವೇಶದಲ್ಲಿ ಈ ಚರ್ಚೆಯ ಅಗತ್ಯತೆ ಮತ್ತು ಮುಂದಿನ ಗುರಿಗಳ ಬಗ್ಗೆ ಬೆಳಕು ಚೆಲ್ಲಲಿದೆ ಎಂದರು.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರಾದ ಎಂ.ಎಸ್. ದಿವಾಕರ್ ಅವರು ರಾಜ್ಯದಲ್ಲಿ ಶಾಖದ ಅಲೆಗಳ ಮುನ್ಸೂಚನೆ ಮತ್ತು ನಿರ್ವಹಣೆಯ ಬಗ್ಗೆ ದತ್ತಾಂಶ ಸಹಿತ ವಿವರಿಸಿದರು. ಐಐಹೆಚ್ಎಎಸ್ ನ ಹಿರಿಯ ಸಹವರ್ತಿ ಎಸ್. ಸ್ವಾತಿ ಅವರು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಉಷ್ಣಾಂಶದ ಕಾರಣಗಳ ಬೆಂಗಳೂರಿನ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಿದರು. ಹೀಟ್ ವಾಚ್ ಸಂಸ್ಥೆಯ ಸ್ಥಾಪಕ ಆಪೇಕ್ಷಿತಾ ವರ್ಷನಯ್ ಅವರು ತೀವ್ರ ಉಷ್ಣಾಂಶದಿAದ ಬಾಧಿತರಾಗುವ ದುರ್ಬಲ ವರ್ಗಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಬಿಬಿಎಂಪಿಯ ಹವಾಮಾನ ಕ್ರಿಯಾ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ನಿತ್ಯಾ .ಜೆ ಅವರು ಏರುತ್ತಿರುವ ತಾಪಮಾನವನ್ನು ಎದುರಿಸಲು ನಗರವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಬಿಸಿಲಿನ ತಾಪದಿಂದ ತತ್ತರಿಸುತ್ತಿರುವ ಹೊರಾಂಗಣ ಕಾರ್ಮಿಕರೊಂದಿಗೆ ‘ಸೊಕ್ರಟಸ್’ ಸಂಸ್ಥೆಯ ಭಾರ್ಗವಿ ನಾಗೇಂದ್ರ ಅವರ ನೇತೃತ್ವದಲ್ಲಿ ವಿಶೇಷ ಸಂವಾದ ನಡೆಯಿತು. ಪ್ರತಿಯೊಂದು ಗೋಷ್ಠಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನೆಡೆಸಿದ್ದು ವಿಶೇಷವಾಗಿತ್ತು.
ಬೆಂಗಳೂರು `ಗ್ಯಾಸ್ ಚೇಂಬರ್’ ಆಗದಂತೆ ತಡೆಯಲು ಹಸಿರು ಹೊದಿಕೆ ಹೆಚ್ಚಳ ಅನಿವಾರ್ಯ: ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ



