ಬೆಂಗಳೂರು: ಪ್ರೇಮಿಗಳ ಜಗಳದ ಮಧ್ಯೆ ಹೋದ ಸ್ನೇಹಿತನ ಕೊಲೆಗೆ ಯತ್ನಿಸಿದ ಯುವಕನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.ತನ್ನ ಗರ್ಲ್ ಫ್ರೆಂಡ್ ಜೊತೆ ಯುವಕ ಫೋನ್ನಲ್ಲಿ ಮಾತಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕನ ಸ್ನೇಹಿತ ಯುವಕನಿಗೆ ಚಾಕು ಇರಿದು, ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿರುವ ಘಟನೆ ಡಿಸೆಂಬರ್ 19 ರಂದು ನಾಯಂಡಹಳ್ಳಿ ಸಮೀಪ ನಡೆದಿದೆ.
ಹಲ್ಲೆಗೆ ಒಳಗಾದ ಯುವಕ ಕಾರ್ತಿಕ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಧನುಷ್ ಹಾಗೂ ಶಾಬುದ್ದೀನ್ ಎಂಬುವರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.ಧನುಷ್ ಹಾಗೂ ಕಾರ್ತಿಕ್ ಒಂದೇ ಏರಿಯಾದ ಪರಿಚಯಸ್ಥ ಯುವಕರು. ಆರೋಪಿ ಧನುಷ್ ಯುವತಿಯೊಬ್ಬಳ ಜೊತೆಗೆ ಪ್ರೀತಿಯಲ್ಲಿದ್ದ. ಇದೇ ಯುವತಿಯ ನಂಬರ್ ಪಡೆದು ಸ್ನೇಹಿತ ಕಾರ್ತಿಕ್ ಕರೆ ಮಾಡಿ ಮಾತನಾಡುತ್ತಿದ್ದ. ಫಾಲೋ ಮಾಡಿ ಧನುಷ್ ಗರ್ಲ್ ಫ್ರೆಂಡ್ ಗೆ ಕಾಟ ಕೊಡ್ತಿದ್ದ.
ಕಾರ್ತಿಕ್ ಕಾಟದಿಂದ ಬೇಸತ್ತು ಹೋಗಿದ್ದ ಯುವತಿ ಈ ವಿಚಾರವನ್ನು ಧನುಷ್ ಗೆ ಹೇಳಿದ್ದಳು. ಈ ವಿಚಾರ ಕಿವಿಗೆ ಬೀಳುತ್ತಿದ್ದಂತೆ ಸಿಟ್ಟಿಗೆದ್ದ ಧನುಷ್ ತನ್ನ ಮತ್ತೋರ್ವ ಸ್ನೇಹಿತ ಶಾಬುದ್ದೀನ್ ನನ್ನ ಜೊತೆಗೆ ಕರೆದುಕೊಂಡು ಕಾರ್ತಿಕ್ಗೆ ಪಾಠ ಕಲಿಸಬೇಕೆಂದು ಕಾರ್ತಿಕ್ ಬಳಿ ಬಂದಿದ್ದಾರೆ.
ಕಳೆದ ಡಿ.19ರ ಸಂಜೆ 6.30ಕ್ಕೆ ಕಾರ್ತಿಕ್ಗೆ ಕರೆ ಮಾಡಿ ಮನೆಯಿಂದ ಹೊರ ಬರುವಂತೆ ಹೇಳಿದ್ದಾರೆ. ಮನೆಯಿಂದ 500 ಮೀಟರ್ ದೂರಕ್ಕೆ ಕರೆಸಿಕೊಂಡು ನಂತರ ಮಚ್ಚು, ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ತಾನೇ ಬೈಕ್ ಹತ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ದೂರು ದಾಖಲಿಸಿದ್ದಾನೆ. ಸದ್ಯ ಕಾರ್ತಿಕ್ ಹೇಳಿಕೆ ಪಡೆದು ಚಂದ್ರಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.