ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಆರೋಪ ಬಿಜೆಪಿಗೆ ಮತ್ತೊಂದು ಅಸ್ತ್ರವಾಗಿದೆ. ಇಂದು ಕೂಡ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸುತ್ತಿದೆ. ಪಾಕ್ ಪರ ಘೋಷಣೆ ಕೂಗಿರುವ ಆರೋಪಿಗಳ ಬಂಧನಕ್ಕೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಜೆಡಿಎಸ್ ಸದಸ್ಯರು ಕೂಡ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ. ಇನ್ನು ಸದನದಲ್ಲಿ ಮಾತನಾಡಿದ ಅಶೋಕ್, ದೋಶ ದ್ರೋಹಿಗಳ ವಿರುದ್ಧ ಏನು ಕ್ರಮ ತಗೊಂಡ್ರಿ? ಸರ್ಕಾರ ಏನು ನೈತಿಕ ಹೊಣೆ ಹೊತ್ತಿದೆ. ಪಾಕ್ ಘೋಷಣೆ ಕೂಗಿದವರ ವಿರುದ್ಧ ಏನು ಕ್ರಮ ಆಗಿದೆ? ವಿಧಾನಸೌಧವನ್ನು ಟೆರರಿಸ್ಟ್ ತಾಣವನ್ನಾಗಿ ಮಾಡಬೇಕಾ? ಎಂದು ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಅಲ್ಲದೇ, ರಾಜ್ಯ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿ ಸಭಾತ್ಯಾಗ ಮಾಡಿದ್ದಾರೆ.
ಈ ಸರ್ಕಾರ ಎದ್ದೇ ಇಲ್ಲ, ಕುಂಭಕರ್ಣ ನಿದ್ದೆಯಲ್ಲಿದೆ. ಈ ಸದನದಲ್ಲಿ ನಾನು ಬಹಳ ವರ್ಷಗಳಿಂದ ಇದ್ದೇನೆ. ಹಿಂದೆ ಖರ್ಗೆಯವರು ಗೃಹ ಸಚಿವರು ಆಗಿದ್ರು, ಕೋಲಾರದಲ್ಲಿ ದಲಿತರನ್ನು ಸುಟ್ಟಾಗ ಪಾಪ ಅವರು ಕಣ್ಣೀರು ಹಾಕಿ ರಾಜೀನಾಮೆ ಕೊಡೋಕೆ ಹೋಗಿದ್ದರು.
ಆದರೆ ಇಲ್ಲಿರುವ ಗೃಹ ಸಚಿವರು ಸಿಎಂ ಏನು ಮಾತಾಡಿಲ್ಲ. ವಿಧಾನಸೌಧ ಕೇಸ್ ನ್ನು ಸಣ್ಣ ಕೇಸ್ ಅಂತಾ ಮುಚ್ಚಿ ಹಾಕ್ತಿದ್ದಾರೆ. ದೇಶ ದ್ರೋಹಿಗಳನ್ನು ಒಬ್ಬರನ್ನು ಬಂಧಿಸಲು ಈ ಸರ್ಕಾರಕ್ಕೆ ಶಕ್ತಿ ಇಲ್ಲ ಅಂದರೆ, ಇಲ್ಲಿ ಇರೋದಕ್ಕೆ ಏನು ನೈತಿಕತೆ ಇದೆ ಅಂತ ಪ್ರಶ್ನಿಸಿದ್ದಾರೆ.
ಗೃಹ ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ವಿಪಕ್ಷ ನಾಯಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಕಟ್ಟಿ ಕಟ್ಟಿ ಕಾಂಗ್ರೆಸ್ ಗೆ ಚಟ್ಟ ಕಟ್ಟಿ, ಸತ್ತೋಯ್ತು ಸತ್ತೋಯ್ರು ಕಾಂಗ್ರೆಸ್ ಸತ್ತೋಯ್ತು, ಏನಿಲ್ಲ, ಏನಿಲ್ಲ, ಕಾಂಗ್ರೆಸ್ ನ ಬಜೆಟ್ ನಲ್ಲಿ, ಸಿದ್ದರಾಮಯ್ಯ ಬಜೆಟ್ ನಲ್ಲಿ ಏನಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿಪಕ್ಷಗಳ ಹೋರಾಟದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮೇಲೆ ಉತ್ತರಿಸಿ ತಮ್ಮ ಭಾಷಣವನ್ನು ಮುಂದುವರಿಸಿದ್ದರು. ಈ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟ ಸಿಎಂ, ತಲೆಯಲ್ಲಿ ಮೆದಳು ಇಲ್ಲ, ಇವರ ತಲೆ ಖಾಲಿ.
ಮಹಾಭಾರತವನ್ನು ಓದಿಲ್ಲ, ರಾಮಯಣವನ್ನು ಓದಿಲ್ಲ. ಸುಮ್ಮನೆ ಅವರು ಯಾರೋ ಹೇಳ್ತಾರೆ ಇಲ್ಲಿ ಬಂದು ಜೈ ಶ್ರೀರಾಮ್ ಎನ್ನೋದು ಎಂದ ಸಿಎಂ ಜೈ ಜೈ ಸೀತಾರಾಮ್ ಎಂದು ಘೋಷಣೆ ಕೂಗಿದ್ದಾರೆ.ಸಭಾತ್ಯಾಗ ಮಾಡಿ ಹೊರಬಂದ ಬಿಜೆಪಿ, ಜೆಡಿಎಸ್ ಶಾಸಕರು ಪಾದಯಾತ್ರೆಗೂ ಮುನ್ನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಭಯೋತ್ಪಾದನೆ ಗ್ಯಾರಂಟಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಇವರ 30 ಪರ್ಸೆಂಟ್ ಭಾಷಣ ಕೇಂದ್ರ ಸರ್ಕಾರ ಹೊಗಳುವ ರೀತಿಯಲ್ಲಿ ಇತ್ತಾ? ಅನುದಾನ ತಾರತಮ್ಯದ ಬಗ್ಗೆ ಸಮರ್ಥನೆ ಮಾಡ್ಕೊತ್ತಾರಲ್ಲ. ಇವರಿಗೆ ನಾಚಿಕೆ ಆಗಲ್ವಾ? ಏಳು ಕೋಟಿ ಜನರಿಗೆ ದ್ರೋಹ ಮಾಡಿದಂತೆ ಅಲ್ವಾ? ತೆರಿಗೆ ಕೊಡೋದ್ರಲ್ಲಿ ಮಹಾರಾಷ್ಟ್ರ ನಂಬರ್ 1, ಕರ್ನಾಟಕ ನಂಬರ್ 2. ಇದನ್ನು ನಾವು ವಿರೋಧ ಮಾಡಿದರೆ ದೇಶ ಒಡೆಯಲು ಅಂತಾ ಹೇಳ್ತಾರಲ್ಲ. ಇದೇ ನರೇಂದ್ರ ಮೋದಿಯವರು ಗುಜರಾತ್ ನಿಂದ ತೆರಿಗೆ ಕೊಡಬೇಡಿ ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.