ತಿರುಮಲ: ತಿರುಪತಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ತಿಮ್ಮಪ್ಪನ ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಅಲಿಪಿರಿ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ತೆರಳಿದ ಭಕ್ತರಿಗೆ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಚಿರತೆಯ ದರ್ಶನವಾಗಿದೆ. ಇದರಿಂದಾಗಿ ಭಕ್ತರು ಗಾಬರಿಗೊಂಡಿದ್ದಾರೆ.
ತಿರುಮಲದ ಶೇಷಾಚಲಂ ಅರಣ್ಯದಲ್ಲಿ ಚಿರತೆ ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಈ ವರ್ಷದ ಆಗಸ್ಟ್ನಲ್ಲಿ ಚಿರತೆಗಳ ಓಡಾಟ ಶ್ರೀವಾರಿಯ ಭಕ್ತರಲ್ಲಿ ಭಯ ಹುಟ್ಟಿಸಿತ್ತು. 48 ಗಂಟೆಗಳಲ್ಲಿ ಅಲಿಪಿರಿ ಸುತ್ತಮುತ್ತ ಚಿರತೆಗಳು ಕಾಣಿಸಿಕೊಂಡಿವೆ.
ಟಿಟಿಡಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾ ಮೂಲಕ ಅದರ ಚಲನವಲನವನ್ನು ಪತ್ತೆ ಮಾಡಿದ್ದಾರೆ.ಅಲಿಪಿರಿಯಿಂದ ಗಾಳಿಗೋಪುರ, ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಹಾಗೂ 38ನೇ ತಿರುವು ಪ್ರದೇಶದಲ್ಲಿ ಐದು ಕಡೆ ಚಿರತೆ ಸಂಚಾರ ಪತ್ತೆಯಾಗಿದೆ. ಇದರ ಚಲನವಲನ ಪತ್ತೆ ಹಚ್ಚಲು ಅಲಿಪಿರಿ ಮಾರ್ಗವಾಗಿ ಗಾಳಿಗೋಪುರದಿಂದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೆ ಸುಮಾರು 500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಪತ್ತೆಯಾಗಿದೆ.