ಗೌರಿಬಿದನೂರು : ನಾನು ಅಭಿವೃದ್ಧಿ ಕಾರ್ಯಗಳ ಮೂಲಕ ವಿರೋಧಿಗಳಿಗೆ ಉತ್ತರ ನೀಡುತ್ತೇನೆಯೇ ಹೊರತು, ಮಾಜಿ ಶಾಸಕ ಶಿವಶಂಕರರೆಡ್ಡಿ ರೀತಿಯಲ್ಲಿ ಗಯ್ಯಾಳಿ ಹೆಂಗಸರಿಗಿAತ ಕಡೆಯಾಗಿ ಮಾತನಾಡುವುದಿಲ್ಲ ಎಂದು ಶಾಸಕ ಕೆ ಎಚ್ ಪುಟ್ಟಸ್ವಾಮಿಗೌಡ ತಿರುಗೇಟು ನೀಡಿದರು.
ನಗರದಲ್ಲಿ 10 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಜಿ ಶಾಸಕರು 25 ವರ್ಷ ಗೆಲ್ಲಿಸಿದ ಜನಗಳಿಗೆ ನೀರು ನೀಡಲು ಮುಂದಾದರೂ ಸಹ ತೊಂದರೆ ನೀಡುತ್ತಾರೆ, ಹಳೇ ಪ್ರವಾಸಿ ಮಂದಿರ ಕಟ್ಟಡ ಕೆಡವಿ ಸುಂದರವಾದ ಹೊಸ ಕಟ್ಟಡ ನಿರ್ಮಿಸಲು ಹೋದರೆ, ಅದಕ್ಕೂ ಅಧಿಕಾರಿಗಳಿಗೆ ಒತ್ತಡ ಹೇರಿ, ತೊಂದರೆ ನೀಡುತ್ತಾರೆ, ಪೊಲೀಸರು ಇಲ್ಲದೇ ಹಳ್ಳಿಗಳಿಗೆ ಹೋಗಿ ಎನ್ನುತ್ತಾರೆ, ಇವರೇ ಗಲಾಟೆ ಮಾಡಿಸಲು ಸ್ಕೆಚ್ ಏನಾದರೂ ಹಾಕಿದ್ದಾರಾ ಎಂದು ಪ್ರಶ್ನಿಸಿದರು?ನಾನು ತಾಲ್ಲೂಕಿನಲ್ಲಿ ಶೂನ್ಯದಿಂದ ರಾಜಕೀಯ ಪ್ರಾರಂಭ ಮಾಡಿ, ಮಾಜಿ ಶಾಸಕರ ಹುಟ್ಟೂರಾದ ನಾಗಸಂದ್ರದಲ್ಲೂ ರಾಜಕೀಯ ಮಾಡಿದ್ದೇನೆ, ಅಂತಹ ಸಮಯದಲ್ಲಿ ಅನೇಕರು ನನಗೆ ಅಂಗರಕ್ಷಕರನ್ನು ನೇಮಿಸಿಕೊಳ್ಳಿ ಎಂದರು, ನಾನು ಆಗಲೇ ತಲೆಕೆಡಿಸಿಕೊಳ್ಳಲಿಲ್ಲ, ಈಗ ನಮ್ಮ ಕಾರ್ಯಕರ್ತರೇ ನನಗೆ ಸೈನಿಕರ ರೀತಿ ಇದ್ದಾರೆ, ಆದರೆ ನಾನು ವಿರೋಧಿಗಳು ಗಲಾಟೆ ಮಾಡಿದರೂ ಸಹ ಶಾಂತ ರೀತಿಯಲ್ಲಿ ವರ್ತಿಸಿ ಎಂದು ಕಿವಿ ಮಾತು ಹೇಳಿದ್ದೇನೆ, ನನ್ನನ್ನು ತಾಲ್ಲೂಕಿನಲ್ಲಿ ಉಳಿಸಿಕೊಳ್ಳಲು, ಅಥವಾ ಮನೆಗೆ ಕಳಿಸಲು ಜನರು ತೀರ್ಮಾನ ಮಾಡಬೇಕೆ ಹೊರತು ನೀವಲ್ಲಾ ಎಂದು ರೆಡ್ಡಿಗೆ ತಿರುಗೇಟು ನೀಡಿದರು.ತಾಲ್ಲೂಕಿಗೆ ಮುಖ್ಯಮಂತ್ರಿ, ಮಂತ್ರಿಗಳು ಬರುತ್ತಾರೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಬೇರೆ ತಾಲ್ಲೂಕುಗಳಿಗಿಂತ ಉತ್ತಮವಾದ ಪ್ರವಾಸಿ ಮಂದಿರ ನಿರ್ಮಿಸುವುದು ನನ್ನ ಕನಸಾಗಿತ್ತು, ಅದರಂತೆ ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ, ಒಂದು ವರ್ಷದೊಳಗೆ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲಾಗುವುದು, ಜೊತೆಗೆ ಮಾದರಿಯಾದ ನಗರಸಭೆ ಕಟ್ಟಡ, ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಕಟ್ಟುವ ಕನಸಿದೆ, ಈಗಾಗಲೇ ಹಳ್ಳಿಗಳಲ್ಲಿ 12 ಸೇತುವೆಗಳನ್ನು ನಿರ್ಮಿಸಲಾಗಿದೆ, ಈಗ 60-70 ಹಳ್ಳಿಗಳಿಗೆ ಹೈ ಮಾಸ್ ದೀಪಗಳನ್ನು ಮಂಜೂರು ಮಾಡಲಾಗಿದೆ.ಮುಂದಿನ ಒಂದು ತಿಂಗಳಲ್ಲಿ 100 ಕೋಟಿ ರೂಪಾಯಿಗಳ ಭೂಮಿಪೂಜೆ ಮಾಡಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿ ಶ್ರಮಿಸಲಾಗುವುದು ಎಂದು ಹೇಳಿದರು.ಚಿಮುಲ್ ನಿರ್ದೇಶಕ ಕಾಂತರಾಜು ಮಾತನಾಡಿ,ಮಾಜಿ ಶಾಸಕ ಶಿವಶಂಕರರೆಡ್ಡಿ, ಈಚೆಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡದೆ ವೈಯುಕ್ತಿಕವಾಗಿ ನಿಂದನೆ ಮಾಡುವುದನ್ನು ಪ್ರಾರಂಭಿಸಿದ್ದಾರೆ, ಹಾಲಿ ಶಾಸಕರನ್ನು ನಾಗಮಂಗಲಕ್ಕೆ ಓಡಿಸುತ್ತೇನೆ ಎಂದು ಹೇಳುತ್ತಾರೆ, ನಿಮಗೆ ಓಡಿಸುವ ಯೋಗ್ಯತೆ ಇದೆಯೇ ಎಂದು ಪ್ರಶ್ನಿಸಿದರು? ನೀವು ಇದೇ ರೀತಿ ಶಾಸಕರನ್ನು ತೇಜೋವದೆ ಮಾಡಿದರೆ, ಜನರು ನಿಮ್ಮನ್ನು ನಿಮ್ಮ ಸ್ವಂತ ಊರಿಗೆ ಓಡಿಸುವರು, ಶಾಸಕರು ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಮತ್ತು ನೀವು 25 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ನಾವು ಸಿದ್ದವಾಗಿದ್ದೇವೆ, ನೀವು ಸಿದ್ದರಿದ್ದೀರಾ ಎಂದು ಸವಾಲು ಹಾಕಿದರು.ಮುಖಂಡ ಅಶೋಕ್ ಕುಮಾರ್ ಮಾತನಾಡಿ, ಶಾಸಕರು ಮಾಡುತ್ತಿರುವ ಅಭಿವೃದ್ದಿ ಕೆಲಸಗಳಿಂದ ಅವರ ವರ್ಚಸ್ಸು ಹೆಚ್ಚಾಗುತ್ತಿದೆ, ಇದರಿಂದ ವಿರೋಧಿಗಳಿಗೆ ನಿದ್ದೆ ಬರುತ್ತಿಲ್ಲ, ಒಬ್ಬ ನುರಿತ ರಾಜಕಾರಣಿಯಾದ ಶಿವಶಂಕರರೆಡ್ಡಿ ಮುಸ್ಲಿಮರು ಜೊತೆಗಿದ್ದರೆ ಟಿಪ್ಪು ಸುಲ್ತಾನ್ ಎನ್ನುತ್ತಾರೆ, ಗೌಡರ ಜೊತೆ ಹೋದರೆ ಮೀರ್ ಸಾಧಿಕ್ ಎನ್ನುತ್ತಾರೆ, ಎಂದು ಲೇವಡಿ ಮಾಡಿದರು.ಮುಖಂಡ ಗೋಪಿ ಮಾತನಾಡಿ, ಶಿವಶಂಕರರೆಡ್ಡಿ ಆಂಧ್ರಪ್ರದೇಶದ ಪೆನುಗೊಂಡದ ನಾಗಲೂರು ಗ್ರಾಮದಿಂದ ವಲಸೆ ಬಂದವರು, ರಾಜಕೀಯ ಮಾಡಿ, ಆದರೆ ದಬ್ಬಾಳಿಕೆ, ನೀಚ ರಾಜಕಾರಣ ಮತ್ತು ವೈಯುಕ್ತಿಕ ನಿಂದನೆ ಮಾಡುವುದನ್ನು ನಿಲ್ಲಿಸಿ, ರಾಜಕೀಯ ನಿಂತ ನೀರಲ್ಲ ಎಂದು ಶಿವಶಂಕರ ರೆಡ್ಡಿಗೆ ಹೇಳಿದರು.ಇದೆ ಸಂದರ್ಭದಲ್ಲಿ ತಹಶೀಲ್ದಾರ್ ಅರವಿಂದ್, ಪೌರಾಯುಕ್ತ ರಮೇಶ್, ನಿವೃತ್ತ ಅಪರ ಜಿಲ್ಲಾಧಿಕಾರಿ ಬಾಬಣ್ಣ, ಎಂ ಡಿ ನರಸಿಂಹ ಮೂರ್ತಿ, ಸುಧಾ, ಬಿ ಆರ್ ಶ್ರೀನಿವಾಸ್ ಮೂರ್ತಿ, ಇಸ್ತೂರಿ ಸತೀಶ್, ವೇಣುಗೋಪಾಲ್, ರಾಘವೇಂದ್ರ ಹನುಮಾನ್, ಅಬ್ದುಲ್ಲಾ, ವಿಜಯ ರಾಘವ, ರಂಗರಾಜು, ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.