ದಾಸವರೆಣ್ಯ ಎಂದು ಹೆಸರಾದ ಪುರಂದರದಾಸರು ಸಂಸಾರದಲ್ಲಿದ್ದು ನಂತರ ಸನ್ಯಾಸಿಗಳಾಗಿ ಮುಖ ಮಾಡಿದವರು. ಪುರಂದರ ವಿಠಲ ಎಂಬ ಅಂಕಿತ ನಾಮವನ್ನು ಇಟ್ಟುಕೊಂಡು ಅನೇಕ ಕೀರ್ತನೆಗಳು ಮುಂಡಿಗೆಗಳು ಭಕ್ತಿಗೀತೆಗಳು ಸುಳಾದಿಗಳನ್ನು ರಚಿಸಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಏಕೈಕ ಉದ್ದೇಶವನ್ನು ಹೊಂದಿದ್ದ ಸುಮಾರು ನಾಕುವರೆ ಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಅವರು ರಚಿಸಿದ್ದಾರೆ.
ಅವರ ಒಂದೊಂದು ಕವನಗಳು ಮನುಷ್ಯ ಜೀವನದ ವಿವಿಧ ಹಂತಗಳಲ್ಲಿ ಹೇಗೆ ಬದುಕಬೇಕು ಎಂದು ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುತ್ತದೆ. ಭಕ್ತಿ ಪ್ರಧಾನವಾದ ಗೀತೆಗಳಂತೂ ಸಾಕ್ಷಾತ್ ದೇವರೇ ಪ್ರತ್ಯಕ್ಷನಾಗಿ ಅವರ ಭಿನ್ನಹವನು ಕೇಳುತ್ತಾನೆ ಎಂಬಂತೆ ಇವೆ ….ಅಂತಹದ್ದೇ ಒಂದು ಕವಿತೆ ಮೂಡಿದ ಕಥೆ ನಿಮ್ಮ ಓದಿಗೆ ಅದು ವಿಜಯನಗರ ಸಾಮ್ರಾಜ್ಯದ ಔನ್ಯತ್ಯದ ಕಾಲ.
ಶ್ರೀಮನ್ಮಹಾರಾಜ ಶ್ರೀ ಕೃಷ್ಣದೇವರಾಯನ ನೆಚ್ಚಿನ ರಾಣಿ ಚಿನ್ನಾಂಬಿಕೆಯ ಭಕ್ತಿ ಪೂರ್ವಕ ಕರೆಗೆ ಓಗೊಟ್ಟು ಪುರಂದರ ದಾಸರು ಅರಮನೆಗೆ ಆಗಮಿಸಿದ್ದರು. ಯತಿಗಳಿಗೆ ತಲೆಬಾಗಿ ನಮಸ್ಕರಿಸಿ ಫಲಾಹಾರಗಳನ್ನು ನೀಡಿ ಸತ್ಕರಿಸಿದಳು ರಾಣಿ ಚಿನ್ನಾಂಬಿಕೆ. ಅತಿಥಿ
ಸತ್ಕಾರ ಮುಗಿದ ನಂತರ ಪುರಂದರದಾಸರು ಸಂಪ್ರೀತರಾಗಿ ರಾಣಿ ಚಿನ್ನಾಂಬಿಕೆಯನ್ನು ತಮ್ಮನ್ನು ಕರೆಸಿದುದರ ಕಾರಣವನ್ನು ಕೇಳಿದರು.
ಅತ್ಯಂತ ಸಂಕೋಚ ಭಾವದಿಂದ ರಾಣಿ ಚಿನ್ನಾಂಬಿಕ ನೀವು ಶ್ರೀ ಕೃಷ್ಣನ ದರ್ಶನಕ್ಕೆ ಹೋಗುತ್ತಿರುವುದು ನಿಜವೇ? ಎಂದು ಕೇಳಿದಳು. ಅದಕ್ಕೆ ಪುರಂದರದಾಸರು ಹೌದೆಂದು ಕತ್ತು ಅಲ್ಲಾಡಿಸಿದರು. ಮೆಲ್ಲನೆ ಅಂತಃಪುರದ ಒಳಕೋಣೆಗೆ ಹೋದ ರಾಣಿ ಚಿನ್ನಾಂಬಿಕ ತನ್ನ ಸೀರೆಯ ಸೆರಗಿನಲ್ಲಿ ಏನನ್ನೋ ಮರೆಮಾಚಿ ತಂದಳು.
ರಾಣಿಯ ಹಿಂಜರಿತ, ಸಂಕೋಚಗಳನ್ನು ಕಂಡು ಪುರಂದರದಾಸರು ‘ಅಮ್ಮ ಯಾವುದೇ ಸಂಕೋಚವಿಲ್ಲದೆ ನಿನ್ನ ಅಭೀಷ್ಟವನ್ನು ಹೇಳು’ ಎಂದು ಹೇಳಲು ತನ್ನ ಸೆರಗಿನ ಮರೆಯಲ್ಲಿ ಅವಿತಿರಿಸಿದ್ದ ಚಿನ್ನದ ತೊಟ್ಟಿಲನ್ನು ಯತಿವರೇಣ್ಯರ ಮುಂದೆ ಹಿಡಿದಳು ರಾಣಿ ಚಿನ್ನಾಂಬಿಕ. ವಿವಾಹವಾಗಿ ಅನೇಕ ವರ್ಷಗಳು ಕಳೆದು ಹೋದರೂ ಮಕ್ಕಳಿಲ್ಲದೆ ಮನದೊಳಗೆ ನೋಯುತ್ತಿದ್ದ ರಾಣಿ ಚೆನ್ನಾಂಬಿಕಳ ಕೈಯಲ್ಲಿನ ಪುಟ್ಟ ತೊಟ್ಟಿಲನ್ನು ಕಂಡು ಆಕೆ ಹೇಳದೆಯೇ ಆಕೆಯ ಮನದ ಇಚ್ಚೆಯ ಅರಿವಾಯಿತು ಯತಿಗಳಿಗೆ.
ಗುರುಗಳೇ ನೀವು ಉಡುಪಿಗೆ ಹೋದಾಗ ಶ್ರೀ ಕೃಷ್ಣನಿಗೆ ಈ ಚಿನ್ನದ ತೊಟ್ಟಿಲನ್ನು ಸಮರ್ಪಿಸಿ ನನಗೆ ಮಗುವಿನ ಭಾಗ್ಯವನ್ನು ಕರುಣಿಸಲು ನನ್ನ ಪರವಾಗಿ ಬೇಡಿಕೊಳ್ಳುವಿರಾ ಎಂದು ಆರ್ತಳಾಗಿ ರಾಣಿ ಕೇಳಿದಾಗ ಯತಿಗಳು ಖಂಡಿತವಾಗಿ ನಿನ್ನ ಪರವಾಗಿ ಆ ಕೃಷ್ಣನಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮಾತುಕೊಟ್ಟು ಪುಟ್ಟ ಚಿನ್ನದ ತೊಟ್ಟಿಲನ್ನು , ಚಿನ್ನದ ತೊಟ್ಟಿಲನ್ನು ಪರ ಊರಿಗೆ ಕೊಂಡೊಯ್ಯಲು ಬೇಕಾದ ಪರವಾನಿಗೆ ಪತ್ರವನ್ನು ಕೂಡ ಪಡೆದು ಹೊರಟರು.
ಹಲವಾರು ದಿನಗಳ ಪಯಣದ ನಂತರ ಕೃಷ್ಣನ ದೇಗುಲಕ್ಕೆ ಬಂದಿಳಿದ ಯತಿವರೇಣ್ಯರು ಮರುದಿನ ಮುಂಜಾನೆ ಪ್ರಾತಃಕಾಲದಲ್ಲಿಯೇ ನಿತ್ಯ ಕರ್ಮಗಳನ್ನು ಪೂರೈಸಿ ದೇವರ ದರ್ಶನಕ್ಕೆ ಬಂದರು. ದೇಗುಲದಲ್ಲಿ ಶ್ರೀ ಕೃಷ್ಣನ ಮುಂದೆ ಕೈಮುಗಿದು ನಿಂತಾಗ ಬಾಲಕೃಷ್ಣ ಅಂಬೆಗಾಲಿಡುತ್ತಾ ತಮ್ಮ ಮುಂದೆ ಬಂದು ನಿಂತಂತೆ ದಾಸರಿಗೆ ಅನುಭವವಾಯಿತು.
ಕೃಷ್ಣ ಅಂಬೆಗಾಲಿಡುತ್ತ ಓಡೋಡಿ ಬಂದು ಕೆನ್ನೆಗೆ ಮುತ್ತು ಕೊಟ್ಟು ತಮ್ಮ ತೊಡೆಯ ಮೇಲೆ ಕುಳಿತಂತೆಯೂ ಭಾಸವಾಯಿತು. ಆಗ ಭಕ್ತಿ ಭಾವದಲ್ಲಿ ತೇಲಿದ ಯತಿಗಳಿಗೆ ಒಡಮೂಡಿದ ಪದವೇಮೆಲ್ಲ ಮೆಲ್ಲನೆ ಬಂದನೆಗೋಪಮ್ಮ ಕೇಳೆಮೆಲ್ಲ ಮೆಲ್ಲನೆ ಬಂದನೆಮೆಲ್ಲ ಮೆಲ್ಲನೆ ಬಂದುಗಲ್ಲಕ್ಕೆ ಮುದ್ದು ಕೊಟ್ಟು ನಿಲ್ಲದೆ ಓಡಿ ಹೋದಕಳ್ಳಗೆ ಬುದ್ಧಿ ಹೇಳೇ. ಎಂದು.
ಹಲವಾರು ದಿನಗಳ ಕಾಲ ಅಲ್ಲಿಯೇ ತಂಗಿದ ಯತಿಗಳಿಗೆ ಅಲ್ಲಿ ಸತ್ಕಾರ,ಆದರೋಪಚಾರ ಕಾರ್ಯಕ್ರಮಗಳು ನಡೆದವು. ವಿಜಯನಗರಕ್ಕೆ
ಮರಳಿದ ಪುರಂದರದಾಸರು ರಾಣಿಯ ಭೇಟಿಗಾಗಿ ಪ್ರಸಾದವನ್ನು ಹಿಡಿದು ಅರಮನೆಯ ಅಂತಃಪುರಕ್ಕೆ ನಡೆದರು. ಪುರಂದರದಾಸರು ಊರಿಗೆ ಬಂದಿದ್ದಾರೆ ಎಂಬ ಸುದ್ದಿ ಕೇಳಿಯೇ ಹಾಲು ಕುಡಿದಷ್ಟು ಸಂತುಷ್ಟಳಾದ ರಾಣಿ ಚಿನ್ನಾಂಬಿಕೆ ಯತಿಗಳಿಗೆ ಯಥೋಚಿತ ಸತ್ಕಾರಗಳನ್ನು ಮಾಡಿದಳು.
ನಂತರ ಪುರಂದರದಾಸರು ರಾಣಿಯ ಆಶಯದಂತೆ ತಾವು ಭಗವದ್ದರ್ಶನ ಪಡೆದ ರೀತಿಯನ್ನು ವಿವರಿಸಿ ತಮಗಾದ ಅನುಭವವನ್ನು ಹಂಚಿಕೊಂಡರು. ಆಗ ಅವರು ಭಾವ ಪರವಶರಾಗಿ ಮೆಲ್ಲ ಮೆಲ್ಲನೆ ಬಂದನೆ ಗೋಪಮ್ಮ ಕೇಳೆ ಎಂದು ತಾವು ಕೃಷ್ಣನ ಸನ್ನಿಧಿಯಲ್ಲಿ ರಚಿಸಿದ ಇಡೀ ಪದವನ್ನು ಸುಶ್ರಾವ್ಯವಾಗಿ ಹಾಡಿದರು. ಕೇಳುತ್ತಿದ್ದ ರಾಣಿ ಚೆನ್ನಾಂಬಿಕೆ ಮನದುಂಬಿ ಆನಂದಿಸಿದಳು. ಅರಮನೆಯ ಪರಿಜನರು ಕೂಡ ಕೃಷ್ಣನವರ್ಣನೆಯನ್ನು ಕೇಳಿ ಸಂತಸದಿಂದ ತಲೆದೂಗಿದರು.
ಅದೆಷ್ಟು ಸುಂದರವಲ್ಲವೇ!! ಒಂದೊಂದು ಕವನದ ಹಿಂದೆಯೂ ಹೀಗೆ ಒಂದು ಕಥೆ ಇರುತ್ತದೆ. ಆ ಕತೆ ಅರಿತರೆ ಆ ಕವನದ ಸ್ವಾರಸ್ಯ ಹೆಚ್ಚಾಗುತ್ತದೆ. ಅರ್ಥಗರ್ಭಿತತೆಯ ಅರಿವಾಗುತ್ತದೆ. ಇದು ಕೃಷ್ಣನ ಕುರಿತು ಪುರಂದರದಾಸರ ಕವನ ಒಡಮೂಡಿದ ಬಗೆ.
ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ