ಬೆಂಗಳೂರು: ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ನಡೆದಿರುವ ಹನುಮಧ್ವಜ ವಿವಾದಕ್ಕೆ ಸಂಬಂಧಪಟ್ಟಂತೆ ರಾಜಕೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗತೊಡಗಿವೆ. ಇಂದು ಬೆಳಿಗ್ಗೆ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಜೆಡಿಎಸ್-ಬಿಜೆಪಿ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಂಡ್ಯ ಜಿಲ್ಲೆಯಲ್ಲಿ ಹೊರಗಿನಿಂದ ಬಂದು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ನೆಲೆಯಿಲ್ಲದಿದ್ದವರಿಗೆ ನೆಲ ಕಲ್ಪಿಸಿಕೊಡುವ ಕೆಲಸವನ್ನು ಜೆಡಿಎಸ್ ಮಾಡಲು ಮುಂದಾಗಿದೆ. ಎಚ್ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಿರುವ ವಿರುದ್ಧ ಕಿಡಿಕಾರಿದ್ದಾರೆ. ಒಂದು ಹಂತದಲ್ಲಿ ಮುಂದುವರಿದು ಮಾತನಾಡಿದ ಅವರು, ಚಿಕ್ಕಮಗಳೂರಿನ ಗಲಭೆಕೋರನೋರ್ವ ಬಂದು ಮಂಡ್ಯದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾನೆ. ನೂತನ್ ಎಂಬಾತನ ಮೇಲೆ ಹಲವು ಪ್ರಕರಣಗಳಿವೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಚೆಲುವರಾಯಸ್ವಾಮಿ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ತಮ್ಮ ಹಳೆಯ ಸ್ನೇಹಿತರು ನನಗೆ ಹಲವು ಸಲಹೆಗಳನ್ನು ನೀಡಿ, ನಾನು ಕೇಸರಿ ಶಾಲು ಹಾಕಿದ್ದನ್ನೆ ಟೀಕಿಸಿದ್ದಾರೆ. ನಮ್ಮ ಮೈತ್ರಿ ಪಕ್ಷವಾದ ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿತು.
ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದೆ. ಕೇಸರಿ ಶಾಲು ಹಾಕಿದ್ದೇ ದೊಡ್ಡ ತಪ್ಪು ಎಂದು ಬಿಂಬಿಸಿದ್ದಾರೆ. ನಾನು ಕೇಸರಿ ಶಾಲು ಹಾಕಿದ್ದೇ ಮಹಾ ಅಪರಾಧವಾ? ಇವರಿಂದ ನಾನು ಕಲಿಯೋದು ಏನು ಇಲ್ಲ. ಮಂಡ್ಯ ಜಿಲ್ಲೆ ಜನತೆ ನನಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ಸಿಗರು ಈಗ ಇಲ್ಲ. ಈಗಿರುವವರೆಲ್ಲಾ ಹಗಲುದರೋಡೆಕೋರರು ಎಂದು ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು.
ಮತ್ತೊಂದೆಡೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆರಗೋಡು ಪ್ರಕರಣದಲ್ಲಿ ಧ್ವಜಹಾರಿಸಲು ಸಂಬಂಧಪಟ್ಟವರಿಗೆ ಮುಚ್ಚಳಿಕೆ ಬರೆದುಕೊಟ್ಟು ಅದನ್ನು ಉಲ್ಲಂಘಿಸಿ ನಡೆದುಕೊಂಡಿದ್ದಾರೆ. ಅವರು ವಿವಾದ ಸೃಷ್ಟಿಸಲು ರಾಜಕೀಯ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.ಫೆ.9ರಂದು ಮಂಡ್ಯ ಬಂದ್ಗೆ ಕರೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿ, ಅವರು ಏನಾದರೂ ಮಾಡಿಕೊಳ್ಳಲಿ, ಜನ ತೀರ್ಮಾನ ಮಾಡುತ್ತಾರೆ ಎಂದಷ್ಟೇ ಹೇಳುವ ಮೂಲಕ ವಿಪಕ್ಷದವರ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.