ಪೀಣ್ಯ ದಾಸರಹಳ್ಳಿ: ’ಕಾರ್ಮಿಕರು ಮತ್ತು ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ಇಂತಹ ಶಿಬಿರಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಿ ಔಷಧಿಗಳನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದು ಸೌಂದರ್ಯ ಕಾಲೇಜಿನ ಸಂಸ್ಥಾಪಕ ಪಿ. ಮಂಜಪ್ಪ ತಿಳಿಸಿದರು.
ಭುವನೇಶ್ವರಿ ನಗರದಲ್ಲಿ ಕರುನಾಡ ಕಾರ್ಮಿಕರ ವೇದಿಕೆಯಿಂದ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಕಾರ್ಮಿಕರು ಸಹ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ದುಡಿಮೆಯ ಮಧ್ಯೆ ಆಗಾಗ ತಮ್ಮ ಕುಟುಂಬಸ್ಥರ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಎಂ. ಕೀರ್ತನ್ ಕುಮಾರ್ ಮಾತನಾಡಿ’ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿ ಅವರಿಗೆ ಚಿಕಿತ್ಸೆ ವೆಚ್ಚದ ಸೌಲಭ್ಯವನ್ನು ನೀಡುತ್ತಿರುವ ಈ ವೇದಿಕೆ ಅವರು ಇನ್ನು ಹೆಚ್ಚಿನ ಆರೋಗ್ಯದ ಜಾಗೃತಿ ಮೂಡಿಸುವ ಕೆಲಸ ಮಾಡಲಿ’ ಎಂದರು.
ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಂದ್ರುಗೌಡ ಮಾತನಾಡಿ’ ರಾಜ್ಯದ್ಯಂತ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಉಚಿತ ಆರೋಗ್ಯ ಶಿಬಿರ ಗಳನ್ನು ಆಯೋಜಿಸಿ ಚಿಕಿತ್ಸೆ ಮಾಡಿಸಲಾಗುತ್ತದೆ’ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ವೈ.ಬಿ.ಎಚ್ ಜಯದೇವ್, ಕಾಯಕಯೋಗಿ ಬಸವರಾಜಣ್ಣ, ಸಮಾಜ ಸೇವಕ ಎಂ.ಬಿ. ದಯಾನಂದ್, ರಾಜ್ಯ ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಗೌಡ, ದಾಸರಹಳ್ಳಿ ಘಟಕದ ಅಧ್ಯಕ್ಷ ಡಿ ಎಸ್ ಸಂತೋಷ್, ಉಪಾಧ್ಯಕ್ಷ ಬಿ.ಕೆ. ಮೂರ್ತಿ, ಬಿ.ಮಂಜುನಾಥ್, ಪರಮೇಶ್ವರ್, ನಿತೇಶ್, ಮಂಜುನಾಥ್ ಮುಂತಾದವರಿದ್ದರು.