ಕೋಲಾರ: ಮಾತೃಭಾಷೆ ಜತೆಗೆ ಹಿಂದಿ ಕಲಿಕೆ ಕಷ್ಟವೆಂಬ ಭಾವನೆ ದೂರ ಮಾಡಿ, ಮಕ್ಕಳು ಅತ್ಯಂತ ಖುಷಿಯಿಂದ ಕಲಿಯುವ ವಾತಾವರಣ ಸೃಷ್ಟಿಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಡಯಟ್ ಉಪನ್ಯಾಸಕಿ ಲಲಿತಾ ಕರೆ ನೀಡಿದರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಶ್ರಯದಲ್ಲಿ ಶಿಕ್ಷಕರಿಗೆ ನಡೆದ ಐದು ದಿನಗಳ ಹಿಂದಿ ಭಾಷಾ ವಿಷಯದ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.
ಮಕ್ಕಳು ಇಷ್ಟಪಟ್ಟು ಕಲಿಯುವ ವಾತಾವರಣವನ್ನು ಶಿಕ್ಷಕರು ಶಾಲೆಗಳಲ್ಲಿ ಸೃಷ್ಟಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಕಲಿಕಾ ವಿಧಾನದಲ್ಲಿ ಬದಲಾವಣೆ ಅಗತ್ಯವಿದೆ, ಮಕ್ಕಳಲ್ಲಿ ಆಸಕ್ತಿ ಮೂಡಿಸಿ ಬೋಧನೆ ಮಾಡಿ ಎಂದರು.ಹಿಂದಿ ಕಲಿಯುವುದರಿಂದ ದೇಶದ ರಾಜಧಾನಿ ಜತೆಗೆ ಉತ್ತರದ ರಾಜ್ಯಗಳಲ್ಲೂ ಉದ್ಯೋಗದ ಅವಕಾಶ ಸಿಕ್ಕಲ್ಲಿ ಧೈರ್ಯದಿಂದ ಕರ್ತವ್ಯ ನಿರ್ವಹಿಸಲು ತೆರಳುವ ಆತ್ಮಸ್ಥೈರ್ಯ ಬರುತ್ತದೆ ಎಂದ ಅವರು, ನಮ್ಮ ಮಾತೃಭಾಷೆ ಕನ್ನಡದೊಂದಿಗೆ ಹಿಂದಿ, ಇಂಗ್ಲೀಷ್ ಕಲಿಕೆ ಇಂದು ಅಗತ್ಯವಾಗಿದೆ ಎಂಬ ಸತ್ಯವನ್ನು ಮಕ್ಕಳಿಗೆ ತಿಳಿಸಿ ಎಂದರು.
5 ದಿನಗಳ ಕಾರ್ಯಾಗಾರದಲ್ಲಿ ನಿಮ್ಮ ಬೋಧನಾ ಗುಣಮಟ್ಟ ಉತ್ತಮಗೊಂಡಿದ್ದು, ಅದನ್ನು ಶಾಲೆಗಳಲ್ಲಿ ಪ್ರಯೋಗಿಸಿ, ತರಬೇತಿಯಲ್ಲಿ ಕಲಿತಿದ್ದನ್ನು ಮಕ್ಕಳಿಗೆ ಧಾರೆಯೆರೆಯಿರಿ ಎಂದರು.ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಎ.ಬಿ.ರಾಮಕೃಷ್ಣಪ್ಪ ಮಾತನಾಡಿ, ಇಂಗ್ಲೀಷ್ನಂತೆಯೇ ಸರ್ಕಾರಿ ಶಾಲೆಗಳಲ್ಲಿ ಆರಂಭದಿಂದಲೇ ಕನ್ನಡ,ಇಂಗ್ಲೀಷ್ ಜತೆ ಹಿಂದಿಯೂ ಕಲಿಯುವಂತಾದರೆ ಒಳಿತು ಎಂದು ತಿಳಿಸಿ, ಹಿಂದಿ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ತಿಳಿಸಿ, ಕನ್ನಡ ನಮ್ಮ ಮಾತೃಭಾಷೆ ನಿಜ ಆದರೆ ಇತರೆ ಭಾಷೆಗಳನ್ನೂ ಜತೆಗೆ ಕಲಿಯುವುದರಿಂದ ನಮ್ಮ ಜ್ಞಾನ ಸಂಪತ್ತು ವೃದ್ದಿಗೆ ಸಹಕಾರಿಯಾಗಲಿದ್ದು, ಮಕ್ಕಳಿಗೆ ಹಿಂದಿ ಕಲಿಸಿ, ಕೇವಲ ಬರವಣಿಗೆ ಮಾತ್ರವಲ್ಲ ಮಾತನಾಡುವುದನ್ನು ಕಲಿಸಬೇಕು ಎಂದರು.
ಜಿಲ್ಲೆಯಲ್ಲಿ ಉತ್ತಮ ಸಂಪನ್ಮೂಲ ಹಿಂದಿ ಶಿಕ್ಷಕರು ಇದ್ದಾರೆ, ಅವರ ಪರಿಣತಿ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಸಿಗುವಂತಾಗಬೇಕು ಎಂದರು. ಜಿಲ್ಲೆಯ ಎಲ್ಲಾ ಹಿಂದಿ ಶಿಕ್ಷಕರು ಜಿಲ್ಲೆಗೆ ಉತ್ತಮ ಗುಣಮಟ್ಟದ ಫಲಿತಾಂಶ ಪಡೆಯಲು ಈಗಿಂದಲೆ ಪೂರ್ವ ತಯಾರಿ ನಡೆಸಲು ತಿಳಿಸಿ, ಕನ್ನಡದಷ್ಟೆ ಸುಲಲಿತವಾಗಿ ಮಕ್ಕಳು ಮಾತನಾಡುವಂತಾಗಬೇಕು ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಅತಿ ಮುಖ್ಯ ಎಂದರು.
ಕಾರ್ಯಾಗಾರದಲ್ಲಿ ಡಯಟ್ ಉಪನ್ಯಾಸಕ ಬಾಲಾಜಿ, ನಾರಾಯಣಸ್ವಾಮಿ ಮಾರ್ಗದರ್ಶನ ನೀಡಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಎಸ್.ಪ್ರಭಾ, ಸೋಮಶೇಖರ್, ಶ್ರೀನಾಥ್, ತೊರಲಕ್ಕಿಯ ವೇಣುಗೋಪಾಲ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಹಿಂದಿ ಶಿಕ್ಷಕರ ಸಂಘದ ಮಾಲೂರು ತಾಲ್ಲೂಕು ಅಧ್ಯಕ್ಷೆ ಮಮತಾ, ಮುಳಬಾಗಿಲು ಅಧ್ಯಕ್ಷ ರಾಘವೇಂದ್ರ, ಬಂಗಾರಪೇಟೆ ಅಧ್ಯಕ್ಷ ಶ್ರೀನಾಥ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಕೋಲಾರ ತಾಲ್ಲೂಕಿನ ಅಧ್ಯಕ್ಷೆ ಲಲಿತಾಕಲಾ ಮತ್ತಿತರರಿದ್ದರು.