ಚೈತ್ರಾ ಆಚಾರ್,ಕನ್ನಡ ಚಿತ್ರರಂಗದ ನಾಯಕಿ ಮತ್ತು ಗಾಯಕಿ. ಪ್ರತಿಭಾವಂತ ನಟಿ. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ನಟಿ ಇವರು. ಇಂಥಾ ಚೈತ್ರಾ ಆಚಾರ್ ಅವರಿಗೆ ಪೊಲೀಸ್ ಸಮವಸ್ತ್ರವನ್ನು ಧರಿಸಿರುವ ಮಹೇಶ್ ಹೊಸಮನಿ ಎಂಬ ವ್ಯಕ್ತಿ ತೀರಾ ಅಶ್ಲೀಲ ಅಸಭ್ಯ ಮತ್ತು ಅಸಹ್ಯ ಮೆಸೇಜ್ ಕಳಿಸಿದ್ದಾನೆ. ಚೈತ್ರಾ ಆಚಾರ್ ವೃತ್ತಿ ಮತ್ತು ಚಾರಿತ್ರ್ಯವನ್ನು ಪ್ರಶ್ನೆ ಮಾಡಿದ್ದಾನೆ. ಹೇಳಿ ಕೇಳಿ ಚೈತ್ರಾ ಮೊದಲೇ ಗಟ್ಟಿಗಿತ್ತಿ. ಇದ್ದಿದ್ದನ್ನು ಇದ್ದಂಗೆ ಹೇಳುವ ವ್ಯಕ್ತಿತ್ವದ ಚೆಲುವೆ. ಈ ಹಿಂದೆ ಇದೇ ತರಹ ಮೆಸೇಜ್ ಕಳಿಸಿದ ಹಲವರ ಮೈಚಳಿ ಬಿಡಿಸಿದ್ದಾರೆ ಚೈತ್ರಾ. ಹೀಗಿರುವಾಗ ಪೊಲೀಸ್ ಸಮವಸ್ತ್ರದಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡಲು ಬಂದಾಗ ಚೈತ್ರಾ ಹೇಗೆ ತಾನೇ ಸುಮ್ಮನೆ ಕೂರಲು ಸಾಧ್ಯ..?ಹೀಗಾಗಿಯೇ ಮಹೇಶ್ ಹೊಸಮನಿಯ ಸಂದೇಶ ನೋಡಿ ಕೆರಳಿ ಕೆಂಡವಾದ ಚೈತ್ರಾ ಕೂಡಲೇ ತಮಗೆ ಬಂದ ಮೆಸೇಜ್ನ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊAಡಿದ್ದಾರೆ. ಮುಲಾಜಿಲ್ಲದೇ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.`ಈ ವ್ಯಕ್ತಿ ಪೊಲೀಸ್ ಕೆಲಸ ಮಾಡದೇ ನೈತಿಕ ಪೊಲೀಸ್ಗಿರಿ ಮಾಡ್ತಿದ್ದಾನೆ. ದಯವಿಟ್ಟು ಸೂಕ್ತ ಕ್ರಮ ಕೈಗೊಳ್ಳಿ” ಎಂದು ಬೆಂಗಳೂರು ಪೊಲೀಸರಲ್ಲಿ ಮನವಿ ಮಾಡಿಕೊಂಡಿರುವ ಚೈತ್ರಾ ಆ ನಂತರ ”ಗೌರವಾನ್ವಿತ ಬೆಂಗಳೂರು ಸಿಟಿ ಪೊಲೀಸ್ ಅವರೇ, ಹೊಸಮನಿ53 ಎಂಬುವ ಈ ವ್ಯಕ್ತಿ ನಿಮ್ಮ ಡಿಪಾರ್ಟ್ಮೆಂಟ್ ಅನ್ಸುತ್ತೆ. ಅವನು ಕೇಳಿದ ಅಸಭ್ಯ ಪ್ರಶ್ನೆಗೆ ದಯವಿಟ್ಟು ನೀವು ಉತ್ತರ ಕೊಡಬಹುದೇ” ಎಂದು ಪ್ರಶ್ನೆ ಮಾಡಿದ್ದಾರೆ. ಹೀಗೆ ಎರಡೆರಡು ಬಾರಿ ಬೆಂಗಳೂರು ಸಿಟಿ ಪೊಲೀಸರಿಗೆ ಚೈತ್ರಾ ಟ್ಯಾಗ್ ಮಾಡಿದ ಬೆನ್ನಲ್ಲೇ,ಚೈತ್ರಾ ಅವರ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ನೋಡಿ ಮಹೇಶ್ ಹೊಸಮನಿ ಪತರುಗಟ್ಟಿದ್ದಾನೆ. ಸ್ಟೋರಿಯನ್ನೇ ತೆಗೆಯುವಂತೆ ಗೋಗರೆದಿದ್ದಾನೆ. ನನ್ನ ವೃತ್ತಿ ಬದುಕಿಗೆ ಸಮಸ್ಯೆಯಾಗುತ್ತೆ ಪ್ಲೀಸ್ ಮೇಡಂ ಕ್ಷಮಿಸಿ ಎಂದು ಇನ್ಸ್ಟಾಗ್ರಾಮ್ ಮೂಲಕವೇ ಕೈ ಕಾಲು ಹಿಡಿಯುವ ಪ್ರಯತ್ನ ಮಾಡಿದ್ದಾನೆ. ಮಹೇಶ್ ಹೊಸಮನಿ ಮೆಸೇಜ್ ”ಸಾರಿ ಮೇಡಂ, ಇತರ ಮೆಸೇಜ್ ಹಾಕಿದ್ದಕ್ಕೆ ತಪ್ಪಾಯ್ತು. ನಾನು ನಿಮ್ಮ ಮೇಲಿನ ಕಾಳಜಿಗೆ ಈ ರೀತಿ ಮೇಸಜ್ ಹಾಕಿದೆ. ಅದರಲ್ಲಿರುವ ಅಕ್ಷರಗಳು ತಪ್ಪಾಗಿರಬಹುದು, ಆದರೆ ನಾನು ನಿಮ್ಮ ಮೇಲಿನ ಕನ್ಸರ್ನ್ಗೆ ಹಾಕಿರೋದು. ಪ್ಲೀಸ್ ಪೋಸ್ಟ್ ತೆಗೆಯಿರಿ ಮೇಡಂ. ಇದು ನನ್ನ ಕೆರಿಯರ್ಗೆ ಸಮಸ್ಯೆಯಾಗುತ್ತದೆ. ಸಾರಿ ಮೇಡಂ. ನಾವು ನಿಮ್ಮ ಸಿನಿಮಾ ನೋಡ್ಕೊಂಡೆ ಬಂದಿರೋದು, ನಾನು ನಿಮ್ಮ ಅಭಿಮಾನಿ. ನಾವು ನಿಮಗೆ ಇತರ ಫೋಟೋ ಹಾಕಿದರೆ ತಪ್ಪಾಗಬಹುದು, ಆದರೆ ನಿಮ್ಮ ಕಾಳಜಿಗೋಸ್ಕರ ಮೇಡಂ. ದಯವಿಟ್ಟು ಸ್ಟೋರಿ ತೆಗೆಯಿರಿ ಮೇಡಂ. ಇದು ನನ್ನ ಕೆರಿಯರ್ಗೆ ಸಮಸ್ಯೆಯಾಗುತ್ತದೆ”. ಆದರೆ ಈ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ ಚೈತ್ರಾ ಆಚಾರ್, ಮತ್ತೆ ಮಹೇಶ್ ಹೊಸಮನಿ ಕಳಿಸಿದ್ದ ಮೆಸೇಜ್ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಓರ್ವ ವ್ಯಕ್ತಿ ನನ್ನ ವೃತ್ತಿ ಅಥವಾ ಕೆಲಸದ ಬಗ್ಗೆ ಸಾರ್ವಜನಿಕವಾಗಿ ಅವಹೇಳನ ಮಾಡುವಾಗ ನಾವೇನೂ ಮಾಡಬಾರದಾ, ಅದೇ ಅವರ ಬುಡಕ್ಕೆ ಬಂದಾಗ ನಿಯಮಗಳು ಬದಲಾಗುತ್ತಾ..ಎಂದು ಪ್ರಶ್ನೆ ಮಾಡಿದ್ದಾರೆ. ಚೈತ್ರಾ ಅವರ ಈ ನಡೆಯಿಂದ ಇನ್ನೂ ಹೈರಾಣಾಗಿರುವ ಮಹೇಶ್ ಹೊಸಮನಿ ಸದ್ಯ ತನ್ನ ಇನ್ಸ್ಟಾಗ್ರಾಮ್ ಖಾತೆಯ ಫೋಟೊ ಮತ್ತು ವಿವರಗಳನ್ನು ಹೈಡ್ ಮಾಡಿದ್ದಾನೆ. ಬೆಂಗಳೂರು ಸಿಟಿ ಪೊಲೀಸರು ಮಹೇಶ್ ಹೊಸಮನಿಯ ವಿರುದ್ಧ ಕ್ರಮ ಕೈಗೊಳ್ಳುತ್ತಾರಾಎನ್ನುವುದನ್ನು ಕಾದು ನೋಡಬೇಕಿದೆ.



